Thursday, October 27, 2016

ನಿಗೂಢನ ಕಥನ

ನಿಗೂಢನ ಕಥನ

1989 ರ ಏಪ್ರಿಲ್ ತಿಂಗಳು. ಅಮೃತಸರದ ಸ್ವರ್ಣ ಮಂದಿರ ಮತ್ತೊಮ್ಮೆ ಭಯೋತ್ಪಾದಕರ ಅಧೀನವಾಗಿ ಹೋಗಿಬಿಡುತ್ತದೆ. ಇವರದು ಖಾಲಿಸ್ತಾನಕ್ಕಾಗಿ ಹೋರಾಟನಡೆಸುತ್ತಿದ್ದ ಉಗ್ರಗಾಮಿಗಳ ಗುಂಪು. ಇವರ ಚಟುವಟಿಕೆಗಳಿಗೆಲ್ಲಾ ಸ್ವರ್ಣಮಂದಿರವೇ ಮುಖ್ಯಾಲಯ. ಸೈಕಲ್ ರಿಕ್ಷಾ ಚಾಲಕನೊಬ್ಬ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದರಿಂದ ಉಗ್ರಗಾಮಿಗಳು ಅವನನ್ನು ಮಂದಿರದೊಳಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಗೊತ್ತಾಗುತ್ತದೆ ಇವನೊಬ್ಬ ಪಾಕೀಸ್ತಾನಿ ISI ಏಜೆಂಟ್ ಎಂದು. ನಾನು ನಿಮಗೆ ಸಹಾಯಮಾಡಬಲ್ಲೆ ಎಂಬ ಆಶ್ವಾಸನೆ ಸಿಕ್ಕನಂತರ ಅವನನ್ನು ಸ್ವರ್ಣ ಮಂದಿರದ ಆವರಣದಲ್ಲೆಲ್ಲಾ ಮುಕ್ತವಾಗಿ ಓಡಾಡಲು ಬಿಡುತ್ತಾರೆ. ಕೆಲವೇ ದಿನಗಳಲ್ಲಿ ಉಗ್ರಗಾಮಿಗಳ ಆಪ್ತನಾಗಿಬಿಡುತ್ತಾನೆ. ಆದರೆ ಮೇ ತಿಂಗಳ 9 ನೇ ತಾರಿಕು NSG ಯವರು ನಡೆಸಿದ ಒಂದು ಬೃಹತ್ ಕಾರ್ಯಾಚರಣೆಯಲ್ಲಿ ಈ ಉಗ್ರಗಳನ್ನು ಸೆದೆಬಡಿದು ಸ್ವರ್ಣಮಂದಿರವನ್ನು ಮುಕ್ತಗೊಳಿಸಲಾಗುತ್ತದೆ. ಈ ಆಪರೇಶನ್ ಬ್ಲ್ಯಾಕ್ ಥಂಡರ್ ಹೆಸರಿನ ಕಾರ್ಯಾಚರಣೆ ನಡೆಯುತ್ತಿರುವಾಗ 'ಪಾಕೀಸ್ತಾನಿ ISI ಏಜೆಂಟು' ವೈರಲೆಸ್ ಸೆಟ್ಟಿನ ಮೂಲಕ NSG ಕಮಾಂಡೋಗಳಿಗೆ ಮಂದಿರದೊಳಗೆ ಹೇಗೆ ಎಲ್ಲಿಗೆ ಬರಬೇಕೆಂಬ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಅಸಲಿಗೆ ಇವರು ಭಾರತದ ಬೇಹುಗಾರಿಕೆ ಇಲಾಖೆಯ ಪೋಲಿಸ್ ಆಫಿಸರ್ ಎನ್ನುವುದು ಕೊನೆಯವರೆಗೂ ಗೊತ್ತಾಗುವುದಿಲ್ಲ. ಉಗ್ರರಿಗೇ ಚಳ್ಳೆಹಣ್ಣು ತಿನ್ನಿಸಿದ ಈ ಚಾಣಾಕ್ಷನಿಗೆ ಭಾರತ ಸರಕಾರ 'ಕೀರ್ತಿ ಚಕ್ರ ' ಪ್ರಶಸ್ತಿಕೊಟ್ಟು ಗೌರವಿಸುತ್ತದೆ.

ಇವರಾರು ಗೊತ್ತೇ?

ಈಗ ಫ್ಯಾಶನಬಲ್ ಆಗಿರುವ ಪದ ಎಂದರೆ Surgical Strike. 11 ಜೂನ್ 2015 ನಲ್ಲೂ ಇಂತಹದೊಂದು ಕಾರ್ಯಾಚರಣೆ ಮಣಿಪುರ ಮತ್ತು ಮ್ಯಾನ್ಮಾರ್ ಬಾರ್ಡರಿನಲ್ಲಿ ನಡೆದಿದ್ದ ಸಂಗತಿ ಈಗ ಪಾಕೀಸ್ತಾನದಲ್ಲಿ ನಡೆದಷ್ಟು ಪ್ರಸದ್ದಿಯಾಗಲಿಲ್ಲ. ಸುಮಾರು 70 ಜನ ಭಾರತೀಯ ಕಮಾಂಡೋಗಳು ಮ್ಯಾನ್ಮಾರಿನ ಒಳಗೆ ನುಗ್ಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ 38 ನಾಗಾ ಗೊರಿಲ್ಲಾಗಳನ್ನು ಕೊಂದು ಅವರ ಉಗ್ರ ಚಟುವಟಿಕೆಗಳನ್ನು ಕೊನೆಗೊಳಿಸಲಾಯಿತು. ಆಗಲೂ ಈ 'ಕೀರ್ತಿ ಚಕ್ರಧಾರಿ' ಅಧಿಕಾರಿಯ ನಿರ್ದೇಶನದಲ್ಲಿ ಈ ಕಾರ್ಯಕ್ರಮ ನಡೆಯಿತು.

ಯಾರಿರಬಹುದು ಈತ?

ಇವರು ಏಳು ವರ್ಷ ವಿವಿಧ ವೇಶಧಾರಿಯಾಗಿ ಪಾಕೀಸ್ತಾನದಲ್ಲಿ ನೆಲಸುತ್ತಾರೆ. ಬ್ರಾಹ್ಮಣರಾಗಿ ಹುಟ್ಟಿದ ಇವರು ಮುಸ್ಲೀಮರಂತೆ ಉದ್ದನೆ ಗಡ್ಡ ಬಿಟ್ಟುಕೊಂಡು ಪಾಕಿಸ್ತನದ ಮಸೀದಿಗಳಲ್ಲಿ ನಮಾಜು ಮಾಡುತ್ತಾರೆ. ಈ ಅವಧಿಯಲ್ಲೇ ದಾವೂದ್ ಇಬ್ರಾಹಿಮ್ ನನ್ನು ಬೇಟೆಯಾಡುವ ಪ್ಲಾನು ಸ್ವಲ್ಪದರಲ್ಲೇ ಮಿಸ್ಸಾಗುತ್ತದೆ.  ತುಂಬಿದ ಕೊಡ ತುಳುಕಲ್ವಂತೆ ಹಾಗೆ ಮಾಧ್ಯಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೆ,ಸುತ್ತಲು ನಡೆಯುತ್ತಿರುವುದನ್ನೆಲ್ಲಾ ಹದ್ದಿನ ಕಣ್ಣುಗಳಿಂದ ಗಮನಿಸುತ್ತಾ ,ಚಿಕ್ಕ ಚಿಕ್ಕ ಮಾಹಿತಿಯನ್ನೂ ಕಲೆಹಾಕುತ್ತಾ ಸದಾ ತಮ್ಮ ಕೆಲಸದಲ್ಲೇ ತಲ್ಲೀನರಾಗಿರುವ ಒಬ್ಬ ದಕ್ಷ ಅಧಿಕಾರಿ ಇವರು.
1968 ನಲ್ಲಿ IPS ಗೆ ಸೇರ್ಪಡೆಯಾದ ಇವರು ಇಂಡಿಯಾದ ಜೇಮ್ಸ್ ಬಾಂಡ್ ಎಂದೇ ಬೇಹುಗಾರಿಕೆಯ ವಲಯದಲ್ಲಿ ಪ್ರಸಿದ್ದಿಯಾಗಿದ್ದಾರೆ.
80 ರ ದಶಕದಲ್ಲಿ ಮಿಜೋರಾಮ್ ಇನ್ನೇನು ಭಾರತದಿಂದ ಬೇರ್ಪಟ್ಟೇ ಬಿಟ್ಟಿತು ಎನ್ನುವಷ್ಟು ಮಟ್ಟಿಗೆ ಬಂಡಾಯವೆದ್ದಿತು. ಆಗ ಇವರು ಭೂಗತರಾಗಿ ಮಿಜೋ಼ ಬಂಡಾಯಕೋರರ ಜೊತೆ ಒಡನಾಟ ಬೆಳಸಿಕೊಂಡು ಒಬ್ಬಬ್ಬರನ್ನೇ ಬಂಡಾಯದಿಂದ ಹಿಮ್ಮೇಟ್ಟಿಬರುವಂತೆ ಮಾಡಿದರು.
ಇತ್ತೀಚಿಗೆ ನಡೆದ ಪಾಕಿಸ್ತಾನದ ಉಗ್ರರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಇವರ Brain child ಅಂತೆ...

ಯಾರಿವರು?

No comments:

Post a Comment