Thursday, October 27, 2016

ಸೊಬಗಿನ ಶ್ರೀಲಂಕಾ

ಸೊಬಗಿನ ಶ್ರೀಲಂಕಾ
                ಶ್ರೀಲಂಕಾದೊಂದಿಗೆ  ನನಗೆ ವಾಯುಪಡೆಯ ದಿನಗಳಿಂದಲೂ ತುಂಬಾ ಗಾಢವಾದ ನಂಟು.  ಆಂತರಿಕ ಕಲಹದಿಂದ ಜನ ಮನಗಳು ಜರ್ಜರಿತವಾದ ಸಮಯವದು. ಭಾರತೀಯ ಶಾಂತಿ ಪಡೆಯ ಅಂಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀಲಂಕಾಕ್ಕೆ ಹೋಗಿ ಬರುವುದು ನಿರಂತರವಾಗಿ ನಡೆಯುತ್ತಿತ್ತು.  ಅಂತಹ ಆತಂಕದ ಸಮಯದಲ್ಲೂ ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಂತೂ ನಿಜ.  ಹೀಗೆ ಹಲವಾರು ವರುಷಗಳ ನಂತರ ಕೈಗೊಂಡ ಪ್ರವಾಸದಲ್ಲಿ ಆದ ಹೊಸ ಅನುಭವ ಏನೆಂದರೆ ಅಲ್ಲಿಯ ಜನಗಳ ಸ್ನೇಹ, ಸೌಹಾರ್ದತೆ ಮತ್ತು ಅತಿಥಿ ಸತ್ಕಾರ.  ಎಲ್ಲಿ ಹೋದರೂ "ಆಯಿಭುವನ್" ಎಂದು ನಗು ಮುಖದ ಸ್ವಾಗತವೆ ಒಂದು ರಾಷ್ಟ್ರೀಯ ಸಂಕೇತವೆಂಬಂತೆ ಕಂಡಿತು.  ಪ್ರವಾಸದ ಸಮಯದಲ್ಲಿ ಹೋಟೆಲುಗಳಿಂದ ದೂರವಿದ್ದು ಹೋಮ್ ಸ್ಟೇ (ಮನೆ ತಂಗು) ಗಳಲ್ಲಿ ಉಳಿಯುವುದರಿಂದ ಅಲ್ಲಿನ ಜನಗಳ ಪರಿಚಯಕ್ಕೆ ಅನುಕೂಲವಾಗಬಹುದೆಂಬ ಉದ್ದೇಶದಿಂದ ಹೋಮ್ ಸ್ಟೇ ಯಲ್ಲೇ ಮುಂಗಡವಾಗಿ ವಸತಿಯನ್ನು ಕಾಯ್ದಿರಿಸಿದೆವು.
ಬೆಂಗಳೂರಿನಿಂದ 'ಮಿಹಿನ್ ಲಂಕಾ'ದ ವಿಮಾನದಲ್ಲಿ ಒಂದೂವರೆ ಘಂಟೆಯ ಯಾನದ ನಂತರ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಚುಮು ಚುಮು ಬೆಳಗಿನ ಜಾವಕ್ಕೆ ತಲುಪಿದೆವು. ಭಾರತೀಯ ಪ್ರಜೆಗಳಿಗೆ ಶ್ರೀಲಂಕಾದ ವೀಸಾ ಅಲ್ಲಿ ತಲುಪಿದ ಮೇಲೆ ಪಡೆಯುವ ಸೌಲಭ್ಯವಿದೆ ಮತ್ತು ಸುಲಭವಾಗಿ ಸಿಗುತ್ತದೆ.
ನಿಗದಿಪಡಿಸಿದಂತೆ ಕೊಲಂಬೊದಿಂದ ಕ್ಯಾಂಡೀ ನಗರಕ್ಕೆ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು.  ಮಾರ್ಗ ಮಧ್ಯದಲ್ಲಿ ಒಂದು ಕಡೆ ನಿಲ್ಲಿಸಿ ಅಲ್ಲಿನ ಶೈಲಿಯ ಉಪಹಾರವನ್ನು ಸವಿದೆವು. ಅಲ್ಲಿಯ ತಿಂಡಿಯ ವೈಶಿಷ್ಟ್ಯವೆನೆಂದರೆ ನಮ್ಮ ಕಡೆಯ ಶಾವಿಗೆಗೆ ಹೋಲುವ 'ಸ್ಟ್ರಿಂಗ್ ಹಾಪರ್ಸ್' ಮತ್ತು ನಿರ್ ದೋಸೆಗೆ ಹೋಲುವ 'ಹಾಪರ್ಸ್'.  ಹೊಟೇಲಿನಲ್ಲಿ ಈ ಎರಡು ಖಾದ್ಯಗಳನ್ನು ಮೀನಿನ ಸಾರು ಮತ್ತು ಕೋಳಿ ಸಾರುಗಳ ಜೊತೆಗೆ ಸವಿಯುವುದನ್ನು ನೋಡಿ ಅಚ್ಚರಿ ಆಯಿತು.
ಕ್ಯಾಂಡೀ ನಗರವನ್ನು ಶ್ರೀಲಂಕಾದ ಸಾಂಸ್ಕೃತಿಕ ನಗರಿ ಎಂದು ಕರೆಯುತ್ತಾರೆ.  ನಗರದ ಪ್ರಮುಖ ಸ್ಥಳಗಳಲ್ಲಿ ಕಂಗೊಳಿಸುವ ಬುದ್ಧನ ಪ್ರತಿಮೆಗಳು, ಅಲ್ಲಲ್ಲಿ ಕಾಣಿಸುವ ದೇವಾಲಯಗಳು ದಟ್ಟವಾಗಿ ಆವರಿಸಿಕೊಂಡಿರುವ ಊದಿನ ಕಡ್ಡಿಗಳ ಸುವಾಸನೆ, ತಾವರೆ ಹೂಗಳ ರಾಶಿ, ಭಕ್ತಾದಿಗಳ ಪ್ರಾರ್ಥನೆ ಇವೆಲ್ಲದರ ಸಮ್ಮಿಲನದಿಂದ ನೋಡುಗರಲ್ಲಿ ಭಕ್ತಿಯ ಭಾವ ಸಹಜವಾಗಿಯೇ ಉಧ್ಭವಿಸುತ್ತದೆ, ಇಲ್ಲಿ ಅತ್ಯಂತ ಪ್ರಸಿದ್ಧವಾದ "ಶ್ರೀದಳದ ಮಲಿಗಾವ" ಬೌದ್ಧ ಮಂದಿರ ಅರೆಮನೆಯ ಆವರಣಲ್ಲಿದೆ. ಇದರ ಇತಿಹಾಸವೆನೆಂದರೆ ಗೌತಮ ಬುದ್ಧನ ಪರಿನಿರ್ವಾಣದ ನಂತರ ಅವರ ಒಂದು ಹಲ್ಲನ್ನು ಕಳಿಂಗ ದೇಶದಿಂದ ಶ್ರೀ ಲಂಕಾಕ್ಕೆ ಕೊಂಡೊಯ್ಯಲಾಯಿತಂತೆ. ಈ ಹಲ್ಲನ್ನು ಬಂಗಾರದ ಸ್ತೂಪದಲ್ಲಿ ಇಟ್ಟು ಈಗಲೂ ನಿಯಮಿತವಾಗಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಶ್ರೀಲಂಕಾದಲ್ಲಿ 'ಹೋಮ್ ಸ್ಟೇ' ವ್ಯವಸ್ತೆ ತುಂಬಾ ಪ್ರಚಲಿತವಾಗಿರುವ ಮತ್ತು ಪ್ರವಾಸಿಗರಿಗೆ ಅನುಕೂಲವಾದ ಆಯ್ಕೆ.  ಕ್ಯಾಂಡೀಯಲ್ಲಿ ನಾವು ಸಹ ಧಮ್ಮಿಕ ಭಂಡರನಾಯಿಕೆ ಎನ್ನುವವರ ಮನೆಯಲ್ಲಿ ಅವರ ಮನೆಯ ಸದಸ್ಯರಂತೆ ಉಳಿದುಕೊಂಡಿದ್ದೆವು. ನಮಗೆ ಪ್ರತ್ಯೇಕವಾಗಿ ಒಂದು ರೂಮಿನ ವ್ಯವಸ್ತೆ ಮಾಡಿದ್ದರೂ ಸಹಾ ಕೆಲವೇ ಸಮಯದಲ್ಲಿ ಇಡೀ ಮನೆಯೇ ನಮ್ಮದೆನಿಸುವಂತಹ ಆತ್ಮೀಯತೆ ಬೆಳೆದು ಬಿಟ್ಟಿತು. ಅಲ್ಲಿ ತಂಗಿದ ಎರೆಡು ದಿನಗಳ ಊಟೋಪಚಾರ ಮತ್ತು ಆದರಾಥಿತ್ಯಗಳಂತೂ ಒಂದು ಆಹ್ಲಾದಕರ ಅನುಭವ.
ನಮ್ಮ ಮುಂದಿನ ಪ್ರಯಾಣ ಸಮುದ್ರ ಮಟ್ಟದಿಂದ ಸುಮಾರು 6300 ಅಡಿಗಳಷ್ಟು ಎತ್ತರದ "ನುವರ ಎಲಿಯ" ಎನ್ನುವ ಶಿಖರ ಶ್ರೇಣಿಯಲ್ಲಿದ್ದ ತಂಗುದಾಣ. ಎಲ್ಲೆಲ್ಲಿ ನೋಡಿದರೂ ಹಸಿರು ಚಾದರವನ್ನು ಹೊದ್ದು ಕೊಂಡು ಬಿಮ್ಮನೆ ಬೀಗುತ್ತಿರುವ ಚಹಾ ತೋಟಗಳು,  ಇಲ್ಲಿ ಬೆಳೆದು ಸಂಸ್ಕರಿಸುವ ಚಹಾ ಪ್ರಪಂಚದ ಶ್ರೇಷ್ಟ ಚಹಾಗಳಲ್ಲಿ ಒಂದು ಎನಿಸಿ ಕೊಂಡಿದೆ. ಈ ಅಚ್ಚ ಹಸಿರಿನ ಬೆಟ್ಟಗಳ ನಡುವೆ ಹಾಲಿನ ಹೊಳೆಯಂತೆ ಹರಿಯುವ ಹಲವಾರು ನಿರ್ಮಲ ಜಲಪಾತಗಳು, ನಿರಂತರವಾಗಿ ಚಲಿಸುವ ಮೋಡಗಳು ಇಲ್ಲಿಯ ಪ್ರಕೃತಿಯ ಮೆರಗಿಗೆ ಪುಟ ಕೊಡುತ್ತವೆ.  ಪ್ರಕೃತಿ ದತ್ತ ಶಬ್ಧಗಳನ್ನು ಬಿಟ್ಟರೆ ಎಲ್ಲಾ ಕಡೆ ಪ್ರಶಾಂತ ವಾತಾವರಣ. ಇಲ್ಲಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸುವುದೇ ಒಂದು ವಿಸ್ಮಯಕಾರಿ ಅನುಭವ. ನುವಾರ ಎಲಿಯಾದಲ್ಲಿಯೂ ಸಹ ನಾವು ಹೋಮ್ ಸ್ಟೇ ನಲ್ಲಿಯೇ ಉಳಿದುಕೊಂಡೆವು. ಅಲ್ಲಿಯ ಪ್ರಕೃತಿಗೆ ತಕ್ಕ ಹಾಗೆಯೇ ಅದರ ಹೆಸರೂ ಕೂಡ "ಮಿಸ್ಟೀ ಹಿಲ್ಸ್" ಎಂದಿತ್ತು.  ಅವರಂತೂ ಇಡೀ ಮನೆಯನ್ನೇ ನಮಗೆ ಬಿಟ್ಟು ಕೊಟ್ಟಿದ್ದರು. ಊಟ ತಿಂಡಿಗಳ ಸಮಯಕ್ಕೆ ಮಾತ್ರ ಇಬ್ಬರು ಪರಿಚಾರಕರು ಬಂದು ಅಡುಗೆ ಮಾಡಿ ಬಿಸಿ ಊಟ ಬಡಿಸುತ್ತಿದ್ದರು.  ಅಲ್ಲಿಯ ಅತಿಥಿ ಸತ್ಕಾರ ಕೂಡ ಅವಿಸ್ಮರಣೀಯ.
  ನುವರ ಏಲಿಯಾದಿಂದ ಸುಮಾರು 5 ಕಿ. ಮೀ. ದೂರದಲ್ಲಿ ಸೀತಾ ಎಲೀಯ ಎನ್ನುವ ಒಂದು ಚಿಕ್ಕ ಹಳ್ಳಿಯಲ್ಲಿ ಸೀತಾ ದೇವಿಯ ದೇವಸ್ಥಾನವೂ ಇದೆ. ಇಡೀ ಪ್ರಪಂಚದಲ್ಲಿ ಇದೊಂದೇ ಸೀತಾ ದೇವಿಯ ದೇವಸ್ಥಾನ ಎನ್ನುವ ವಿಶೇಷತೆಯಿಂದಾಗಿ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಸುತ್ತಲೂ ಇರುವ ಸುಮಾರು 5 ಚದರ ಕಿ. ಮೀ. ಗಳ 'ಹಕ್ಕಲಗ' ಉಧ್ಯಾನವನ ರಾಮಾಯಣದ 'ಅಶೋಕ ವನವಂತೆ'!    ಸರಿ ಅಂತೂ ನಾಲ್ಕು ದಿನಗಳು ಗಿರಿ ವನಗಳ ನಡುವೆ ಕಳೆದ ಆಹ್ಲಾದಕರ ಅನುಭವದೊಂದಿಗೆ  ಮರಳುವ ಸಮಯ ಬಂದೇ ಬಿಟ್ಟಿತು.  ಈ ಭಾಗದ ಪ್ರಯಾಣ ಕೂಡ ಒಂದು ಮರೆಯಲಾಗದ ಅನುಭವವಾಗುತ್ತದೆಂಬ ಅರಿವೇ ನಮಗಿರಲಿಲ್ಲ.
ನುವರ ಏಲಿಯಾದ ಹತ್ತಿರದ ರೈಲು ನಿಲ್ದಾಣದಿಂದ ಕೊಲಂಬೊ ನಗರಕ್ಕೆ ಒಂದು ವಿಶೇಷವಾದ ರೈಲು ಸಂಚಾರದ ವ್ಯವಸ್ಥೆ ಇದೆ.  ವಿದೇಶಿ ಪ್ರವಾಸಿಗರಿಗೆಂದೇ ವಿನ್ಯಾಸಗೊಳಿಸಿರುವ ಈ ರೈಲಿನ ಕೊನೆಯ ಬೋಗಿಯನ್ನು 'ವೀಕ್ಷಣಾ ಬೋಗಿ' ಎಂದು ಕರೆಯುತ್ತಾರೆ. ಇಡೀ ಬೋಗಿಯು ಒಂದು ಗಾಜಿನ ಟ್ಯೂಬಿನಂತೆ ಕಾಣುತ್ತದೆ. ಮಂದಗತಿಯಲ್ಲಿ ಚಲಿಸುವ ಈ ರೈಲು ಚಹಾ ತೋಟಗಳನ್ನು ಸುತ್ತುವರೆಯುತ್ತಾ, ಜಲಪಾತಗಳನ್ನು ಸವರಿಕೊಳ್ಳುತ್ತಾ, ಮೋಡಗಳೊಂದಿಗೆ ಮಾತಾಡುತ್ತಾ, ಆಗಾಗ ಸುರಂಗಗಳನ್ನು ಸೀಳಿಕೊಳ್ಳುತ್ತಾ ಸಾಗುತ್ತಿರುವ ಈ ರೈಲಿನಲ್ಲಿ ಕೂತುಕೊಂಡು ಇಲ್ಲವೇ ಮಲಗಿಕೊಂಡು ಪ್ರತೀ ನಿಮಿಷಕ್ಕೂ ಬದಲಾಗುತ್ತಿರುವ  ಆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ರೋಮಾಂಚನದ ಅದ್ಭುತ ಅನುಭವ.
ಶ್ರೀಲಂಕಾ ಪ್ರವಾಸಿಗರು ಈ ಕೆಳಗಿನ ಸಂಗತಿಗಳನ್ನು ಗಮನಿಸಬೇಕು.
ಶ್ರೀಲಂಕಾ ಜನಗಳ ಸ್ನೇಹ ಸೌಹಾರ್ದತೆಗಳ ಪರಿಚಯವಾಗ ಬೇಕು ಎಂದರೆ ಹೋಮ್ ಸ್ಟೇ ಅತ್ಯುತ್ತಮ ಆಯ್ಕೆ.  ಇದರಲ್ಲೂ ಕೂಡ ಕಾಸಿದ್ದಷ್ಟು ಕಜ್ಜಾಯ ಎನ್ನುವ ಹಾಗೆ ಎಲ್ಲ ವರ್ಗಗಳ ಆಯ್ಕೆಯೂ ಇದೆ.
   ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಮತ್ತು ವಿಶ್ರಮಿಸಲು ಸಮಯದ ನಮ್ಯತೆ (flexibility) ಇರಲಿ.
  ಒಂದು ಕಡೆಯ ರೈಲು ಪ್ರಯಾಣವಂತೂ ಕಡ್ಡಾಯವಾಗಿ ನಿಮ್ಮ ಪ್ರೋಗ್ರಾಮಿನಲ್ಲಿ ಇರಲಿ.


    

No comments:

Post a Comment