Monday, March 27, 2017

ಜಲಲ ಜಲಲ ಜಲ ಧಾರೆ..


 ಹರಿಯುವ ನೀರಿಗೆ ಇರುವ ಚೈತನ್ಯದಾಯಕತೆ, ಔಷದೀಯ ಗುಣಗಳು ನಿಂತ ನೀರಿಗೆ ಇರಲ್ವಂತೆ..ಹೀಗಂತ ನಮ್ಮಜ್ಜ ನನಗೆ ನಮ್ಮ ಕುಲ ಕಸಬನ್ನು ಕಲಿಸಿಕೊಡುವಾಗ ಹೇಳಿಕೊಟ್ಟ ಮೊದಲ ಪಾಠ. ನಾವು 'ನೀರುಗಂಟಿಗಳ' ವಂಶದವರು, ಜಲ ನಿರ್ವಹಣೆಯೇ ನಮ್ಮ ಜೀವನ.
      ವಿಜಯನಗರದ ಅರಸರು ನೀರಿಗೆ ಕೊಟ್ಟೊಷ್ಟು ಮಹತ್ವವನ್ನು ಇನ್ನಾರೂ ಕೊಡಲಿಲಲ್ಲವಂತೆ. ಎರಡು ಗುಡ್ಡಗಳನ್ನು ನೋಡಿದರೆ ಸಾಕು ಅದರ ಕಣಿವೆಯಲ್ಲಿ ಕೆರೆ ಕಟ್ಟಿಸುತ್ತಿದ್ದರಂತೆ. ನೋಡು ನೋಡುತ್ತಿದ್ದಂತೇ ಕೆಲವೇ ವರ್ಷಗಳಲ್ಲಿ ಕೆರೆತುಂಬಿಕೊಂಡು, ಸುತ್ತಲೂ ಹಸಿರು ಹರಡಿಕೊಂಡು,ಹಸನಾದ ಬೆಳೆಗಳ ಸಮೃಧ್ಧದ ಬೀಡಾಗುತ್ತಿತ್ತಂತೆ. ಆ ಕೆರೆಗಳ ನಿಯಂತ್ರಣಕ್ಕೆ ನಮ್ಮ ವಂಶದ ನೀರುಗಂಟಿಗಳ ನೇಮಕವಾಗುತ್ತಿತ್ತು. ಹಾಗಾಗಿ ಕೆರೆಗಳ ಜೊತೆಗೇ ನಮ್ಮ ವಂಶವೂ ಹರಡಿಕೊಳ್ಳ ತೊಡಗಿತು.
      ಆಗ ವ್ಯಾಪಾರಾರ್ಥವಾಗಿ  ವಿಜಯನಗರಕ್ಕಾಗಲೇ ಪೋರ್ಚುಗೀಸರ ಪ್ರವೇಶವಾಗಿತ್ತು. ಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಇವರ ಹಡಗಿನಿಂದಲೇ ಅರಬ್ಬೀ ದೇಶದಿಂದ ಗೋವಾಕ್ಕೆ, ಭಟ್ಕಳದ ಬಂದರಿನಿಂದ ವಿಜಯನಗರಕ್ಕೆ ಬರುತ್ತಿದ್ದವು. ಇವರ ಇನ್ನೊಂದು ತಾಂತ್ರಿಕ ಪರಿಣಿತಿಯಿಂದ ಕೃಷ್ಣದೇವರಾಯರಿಗೆ ಇವರು ಆಪ್ತರಾದರು. ಇವರೂ ನಮ್ಮ ಹಾಗೆ ಜಲ ನಿರ್ವಹಣೆಯ ಪ್ರವೀಣರು. ನನ್ನನ್ನು 'ಪೋಂಟೆ' ಎಂಬ ತಂತ್ರಙ್ನರೊಡನೆ ತರಬೇತಿಗೆ ನಿಯಮಿಸಲಾಯಿತು.
      ಕೃಷ್ಣದೇವರ ಯೋಜನೆಯ ಪ್ರಕಾರ ತುಂಗಭಧ್ರಾನದಿಯ ನೀರನ್ನು ಕಾಲುವೆಗಳ ಮೂಲಕ ಕಮಲಾಪುರದ ಕೆರೆಯವರೆಗೂ ಹರಿಸುವುದು. ಈ ಯೋಜನೆಯಿಂದ ಉತ್ತರಕ್ಕೆ ತುಂಗಭದ್ರೆ, ದಕ್ಷಿಣಕ್ಕೆ ಕಮಲಾಪುರದ ಕೆರೆ... ವರ್ಷವಿಡೀ ನೀರಿನ ಕೊರತೆಯೇ ಇಲ್ಲ..ಎಂಥಹ ಅಧ್ಭುತ ವಿಚಾರ. ಕಲ್ಲು ಬಂಡೆಗಳ ನಾಡೆಂದು ಹೆಸರು ಪಡೆದಿದ್ದ ವಿಜಯನಗರ ಏನಾಗಬಹುದು.
      ಕಲ್ಲು ಬಂಡೆಗಳೇ ನಮ್ಮ ಅಣೆಕಟ್ಟಿನ ಮೂಲಾಧಾರ. ಹಂಪೆಯಿಂದ ಸುಮಾರು ಮೂವತ್ತು ಮೈಲಿದೂರದಲ್ಲಿ ತುಂಗಭದ್ರ ನದಿ ಕವಲೊಡೆದು ಹರಿಯುತ್ತಿತ್ತು. ಮಧ್ಯ ಒಂದು ಪುಟ್ಟ ದ್ವೀಪ. ಯೋಜನಯಂತೆ ದ್ವೀಪದ ಎರಡೂ ಕಡೆ ಕಲ್ಲು ಬಂಡೆಗಳಿಂದಲೇ ಅಣೆಕಟ್ಟು ಕಟ್ಟುವುದು ಮತ್ತು ನದಿ ನೀರನ್ನು ಇಬ್ಬದಿಯಿಂದಲೂ ಕಾಲುವೆಗಳಿಗೆ ಹರಿಸುವುದು. ಕಲ್ಲು ಬಂಡೆಗಳ ನಡುವೆ ಹೂಣು ಕಟ್ಟದಹಾಗೆ ಕಿರಿದಾದ ಜಾಗದಲ್ಲಿ ವೇಗವಾಗಿ ನೀರು ಹರಿಯುತ್ತಿತ್ತು. ಹೀಗೆ ನದಿ ನೀರಿನ ವೇಗಕ್ಕಿಂತ ಕಾಲುವೆ ನೀರಿನ ರಭಸ ಹೆಚ್ಚಾಗಿ ಎತ್ತರದ ಪ್ರದೇಶಗಳಿಗೆ ನೀರು ಸರಾಗವಾಗಿ ತಲುಪುತ್ತಿತ್ತು.
      ಕೃಷ್ಣದೇವರಾಯರ ಸಮ್ಮುಖದಲ್ಲೇ ಇದರ ಉಧ್ಗಾಟನೆ ವಿಜ್ರಂಭಣೆಯಿಂದ ನಡೆಯಿತು. ಈ ಕಾಲುವೆಗೆ 'ರಾಯ ಕಾಲುವೆ' ಎಂದು ಹೆಸರಿಸಲಾಯಿತು.
      ಕೃಷ್ಣದೇವರು ಆಗತಾನೇ ಅವರ ತಾಯಿಯ ನೆನಪಿನಲ್ಲಿ'ನಾಗಲಾಪುರ' ನಗರವನ್ನು ಕಟ್ಟಲು ಪ್ರಾರಂಭಿಸುತ್ತಿದ್ದರು. ನಗರ ನಿರ್ಮಾಣಕ್ಕೆ ಮೊದಲೇ ತುಂಗಭದ್ರೆ ಆ ನಗರ ಪ್ರವೇಶಕ್ಕೆ ಸಿಧ್ಧಳಾಗಿದ್ದಳು.
      "ಕಟ್ಟು ಮತ್ತು ಕೊಡುಗೆ" ಎನ್ನುವ ಯೋಜನೆ ವಿಜಯ ನಗರ ಸಾಮ್ರಾಜ್ಯದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ಮತ್ತು ಜಮೀನುದಾರಿಗೆ ಜನಪ್ರಿಯವಾದ ಅವಕಾಶ. ಇದರ ಪ್ರಕಾರ ಕೆರೆ, ಕಾಲುವೆ ಮತ್ತು ಚಿಕ್ಕ ಅಣೆಕಟ್ಟುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ 'ಕಟ್ಟು'ವವರಿಗೆ 'ಕೊಡುಗೆ'ಯಾಗಿ ಕೆಲವು ಎಕರೆ ಜಮೀನನ್ನು ದೇಣಿಗೆಯಾಗಿ ಕೊಡುತ್ತಿದ್ದರು. ಕೆರೆ ಕಾಲುವೆಗಳ ನಿರ್ವಹಣೆ ಮಾಡುತ್ತಿದ್ದ ನಮ್ಮ ವಂಶಸ್ತರಿಗೆ ತೆರೆಗೆ, ಕಂದಾಯಗಳ ವಿನಾಯಿತಿ ಇರುತ್ತಿತ್ತು.
      ಹೀಗಾಗಿ ರಾಜಬೊಕ್ಕಸಕ್ಕೆ ನಷ್ಟವಿಲ್ಲದೆ ಸಾಮ್ರಾಜ್ಯ ಸಂಪದ್ಭರಿತವಾಗಿ ಬೆಳೆಯುತ್ತಾಹೋಯಿತು.

ಧರ್ಮೋ ರಕ್ಷತಿ ರಕ್ಷಿತಃ




ಕೃಷ್ಣದೇವರಾಯರ ಜೊತೆ ಇದು ಏಳನೇ ಸಲ ನಾನು ತಿರುಪತಿಗೆ ಹೋಗುತ್ತಿರುವುದು. ಪ್ರತಿಯೊಂದು ಸಲ ಹೋದಾಗಲೂ ಅದೊಂದು ಅಧ್ಭುತ ಅನುಭವ. ಮೊದಲ ಸಲ ನಮ್ಮ ತಂದೆ ಶ್ಯಾಮಾಶರ್ಮರ ಮೇಲ್ವಿಚಾರಣೆಯಲ್ಲಿ ನಾವು ಮೂವರು ವಿದ್ಯಾರ್ಥಿಗಳುರಾಯರ ಜೊತೆ ತಿರುಪತಿಯ ತೀರ್ಥಯಾತ್ರೆಗೆ ಆಯ್ಕೆಯಾಗಿದ್ದೆವು.
      ದೇವರಾಯರು ಇತರೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಾಗ ಅವರ ಜೊತೆ ಹೋಗಲು ಯೊಗ್ಯವಾದ ಒಂದು ತಂಡವನ್ನು ಸ್ಪರ್ಧೆಯ ಮುಖಾಂತರ ಆಯ್ಕೆ ಮಾಡಲಾಗುತ್ತಿತ್ತು.

ತಿರುಪತಿಯ ತಂಡದಲ್ಲಿದ್ದವರಿಗೆ ಕನ್ನಡ, ತೆಲುಗು ಮತ್ತು ಸಂಸ್ಕೃತ ಚೆನ್ನಾಗಿ ಗೊತ್ತಿರಬೇಕು. ಕೆಲವೊಮ್ಮೆ ಪುರಂದರದಾಸರೂ ಬರುತ್ತಿದ್ದರು, ಹಾಗಾಗಿ ಅವರ ದೇವರನಾಮಗಳನ್ನು ಸುಶ್ರಾವ್ಯವಾಗಿ ಹಾಡಲು ಬರಬೇಕು. ಎಲ್ಲದಿಕ್ಕಿಂತ ಮಿಗಿಲಾಗಿ ಧಾರ್ಮಿಕ ವಿಷಯಗಳನ್ನು ಅದರಲ್ಲೂ ತಿರುಪತಿಯ ಬಗ್ಗೆ ವಿಷೇಶವಾಗಿ ತಿಳಿದು ಕೊಂಡಿರಬೇಕು ಏಕೆಂದರೆ ಈ ತೀರ್ಥಯಾತ್ರೆಯ ಸಮಯದಲ್ಲೇ ಕೃಷ್ಣದೇವರಾಯರು ತಮ್ಮ 'ಅಮುಕ್ತಮಲ್ಯದ' ರಚತೆಯಲ್ಲಿ ತೊಡಗುತ್ತಿದ್ದರು.

      ಕೃಷ್ಣದೇವರಾಯರಿಗೊಮ್ಮೆ ಕನಸಿನಲ್ಲಿ ವಿಷ್ಣುದೇವರು ಪ್ರತ್ಯಕ್ಷವಾಗಿ ಅವರ ಮತ್ತು 'ಆಂಡಾಳಮ್ಮನವರ' ವಿವಾಹದ ಬಗ್ಗೆ ಬರೆಯಲು ಆದೇಶಿದ್ದರಂತೆ ಆ ಅಧ್ಭುತ ಕೃತಿಯೇ 'ಆಮುಕ್ತಮಲ್ಯದ' ಇದರ ರಚನೆಗೆ ಕೆಲವೊಮ್ಮೆ ನಮ್ಮ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಇದಕ್ಕೆ ತೆಲುಗಿನ ಅಣ್ಣಮಯ್ಯನವರ ಪದಗಳ ಪರಿಚಯವೂ ಇರಬೇಕಿತ್ತು..ಹಾಗಾಗಿ ನಾವು ಅವರ ಸಾಹಿತ್ಯರಚನೆಯ ಗುಂಪಿನ ಸದಸ್ಯರಾಗಿದ್ದೆವು.
 
     ತಿರುಪತಿ ತಲುಪಿದಮೇಲೆ ನಮ್ಮ ಜವಾಬ್ದಾರಿಗಳು ಇನ್ನೂ ಹೆಚ್ಚಾಗುತ್ತಿದ್ದವು. ಪ್ರತಿಸಲ ಬಂದಾಗಲೂ ದೇವಸ್ಥಾನಕ್ಕೆ ಕೊಡುವ ಅನುದಾನದ ವಿವರಗಳನ್ನು ತಯಾರಿಸಬೇಕಾಗಿತ್ತು. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅವರ ಅವಶ್ಯತೆಗಳನ್ನು ಆಗಿಂದ್ದಾಗ್ಗೇ ಪೂರೈಸುತ್ತಿದ್ದೆವು. ಯಾತ್ರಾರ್ತಿಗಳಿಗೆ ವಸತಿಗೃಹ ನಿರ್ಮಾಣ, ಅನ್ನ ಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಇತರೆ ದೇವಸ್ತಾನಗಳಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಇದರ ವರದಿಯನ್ನು ಸಾಯಂಕಾಲದ ಗಾನಸಭೆ ಮುಗಿದ ನಂತರ ಕೃಷ್ಣದೇವರಾಯರಿಗೆ ವರದಿ ಸಲ್ಲಿಸ ಬೇಕಾಗಿತ್ತು.
 
     ಮೊದಲ ಸಲತಿರುಪತಿಗೆ  ಬಂದಾಗ ವ್ಯಾಸತೀರ್ಥರು ಇಲ್ಲೇ ನೆಲಸಿದ್ದರು. ರಾಯರು ಅವರನ್ನು ವಿಜಯನಗರಕ್ಕೆ ಆಹ್ವಾನಿಸಿದರು. ಮೊದಲು ತಿರುಪತಿಯನ್ನು ಬಿಟ್ಟುಬರಲು ನಿರಾಕರಿಸಿದ್ದರು ಆದರೆ ಕೃಷ್ಣದೇವರಾಯರು ತಾವು ನಿರಂತರವಾಗಿ ನಡೆಸುತ್ತಿರುವ ಧರ್ಮಸಂರಕ್ಷಣೆಯ ಯುಧ್ಧದ ಬಗ್ಗೆ ಅರಿವು ಮಾಡಿಕೊಟ್ಟಮೇಲೆ ಆಹ್ವಾನವನ್ನು ಸ್ವೀಕರಿಸಿ ವಿಜಯನಗರಕ್ಕೆ ಬಂದರು ಮತ್ತು ಅಲ್ಲೇ ನೆಲಸಿಬಿಟ್ಟರು.
 
     ಉತ್ತರದಲ್ಲಾಗಲೇ ಮುಸ್ಲೀಮ್ ಮತಾಂಧರು ಅಟ್ಟಹಾಸದಿಂದ ಮೆರೆಯುತ್ತಿದ್ದರು.
     "ಕೃಷ್ಣಾನದಿಯಿಂದ ದಕ್ಷಿಣಕ್ಕೆ ಅವರು ಬಾರದಂತೆ ನಾನು ನೋಡಿಕೊಳ್ಳುತ್ತೇನೆ ನೀವು ನಮ್ಮ ಪ್ರಜೆಗಳು ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿ ನಮ್ಮ ಸನಾತನ ಧರ್ಮವನ್ನು ಕಾಪಾಡುವಂತೆ ಮಾರ್ಗದರ್ಶನ ಮಾಡಿ"  ಎಂದು ಕೋರಿಕೊಂಡ ಮೇಲೆ ವ್ಯಾಸತೀರ್ಥರು, ಪುರಂದರದಾಸರು ಮತ್ತು ಕನಕದಾಸರು ಸೇರಿಕೊಂಡು ದಾಸ ಸಾಹಿತ್ಯದ ಹುಟ್ಟು ಹಾಕಿದರು.

    ದೇವಭಾಷೆಯಾದ ಸಂಸ್ಕೃತದಲ್ಲಿ ಹುದುಗಿಹೋಗಿದ್ದ ವೇದ, ಉಪನಿಷತ್ತುಗಳ ತಿರುಳನ್ನು ಆಡುಭಾಷೆಯಾದ ಕನ್ನಡಕ್ಕೆ ದೇವರನಾಮಗಳ ಮೂಲಕ, ಸಂಗೀತದ ಮೂಲಕ ಸರಳವಾದ ರೀತಿಯಲ್ಲಿ ಜನರಿಗೆ ಮನದಟ್ಟುವ ಹಾಗೆ ಹೊರತಂದರು. ದೇವಸ್ಥಾನಗಳನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತಿಸಿದರು. ಶ್ರೀಶೈಲ, ಶ್ರೀರಂಗ, ಮೇಲುಕೋಟೆ,ಹರಿಹರ, ಉಡುಪಿ ಮುಂತಾದ ಅನೇಕ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಪ್ರೋತ್ಸಾಹಿಸಿದರು. ವಿಜಯನಗರ ಸಾಮ್ರಾಜ್ಯದ ಉದ್ದಗಲಕ್ಕೂ ವಿರೂಪಾಕ್ಷ, ವಿಟ್ಟಲ, ರಾಮ, ಕೃಷ್ಣರ ಮತ್ತು ಅವರವರ ಗ್ರಾಮದೇವರುಗಳ  ದೇವಸ್ಥಾನಗಳನ್ನು ಕಟ್ಟಿಸಿದರು.
 
    ಜನಗಳಲ್ಲಿ ತಮ್ಮ ತಮ್ಮ ಜಾತಿಗಳ ಬಗ್ಗೆ ಇದ್ದ ಸಂಕುಚಿತ ನಿಲುವನ್ನು ಸಾಕಷ್ಟು ಮಟ್ಟಿಗೆ ದೂರಮಾಡಿದರು. ದೇವರನಾಮಗಳಲ್ಲೇ ಸಾಮಾಜಿಕ ಚಳುವಳಿ ನಡೆಯತೊಡಗಿತು. ಸಂಗೀತಸುಧೆಯ ಜೊತೆಗೆ ಭಕ್ತಿಸಾರದ ಹೊಳೆಯೇ ಹರಿಯತೊಡಗಿತು. ಹಳ್ಳಿ ಹಳ್ಳಿಗಳಲ್ಲೂ ಮಠಗಳು ಉಧ್ಭವವಾದವು, ಜನಗಳಲ್ಲಿ ಧಾರ್ಮಿಕ ಪ್ರವೃತ್ತಿ ಬೆಳೆಯುತ್ತಾ ಹೋಯಿತು.  ನಾವೇನೋ ಬ್ರಾಹ್ಮಣರು..ವೇದಾದ್ಯಯನ, ಪೂಜೆ ಪುನಸ್ಕಾರಗಳು ನಮಗೆ ಪರಂಪರಾಗತವಾಗಿ ಕಲಿಸಲಾಗಿದೆ, ಅದೇ ನಮ್ಮ ಜೀವನಾಧಾರವೂ ಕೂಡ. ಧರ್ಮ ಪಾಲನೆ ನಮ್ಮ ವೃತ್ತಿ.
    ಕೃಷ್ಣದೇವರಾಯರು ತಮ್ಮ ಜೀವನದ ಒಂದು ಪಾತ್ರದಲ್ಲಿ  ಯೋಧನಾಗಿ ಯುಧ್ಧಭೂಮಿಯಲ್ಲಿ ಹೋರಾಡುತ್ತಾ, ಮಾರಣಹೋಮ ನಡೆಸುತ್ತಾ ಇತರೆ ಮತಾಂಧರಿಂದ ಸನಾತನ ಧರ್ಮಕ್ಕೆ ಧಕ್ಕೆಯಾಗದಂತೆ ರಕ್ಷಿಸುತ್ತಿದ್ದರೆ ಇನ್ನೊಂದು ಪಾತ್ರದಲ್ಲಿ ತಾವೇ ಗುರುಗಳಲ್ಲಿ ರಾಜಗುರುವಾಗಿ, ಪುರೋಹಿತರಲ್ಲಿ ಮುಖ್ಯ ಪುರೋಹಿತರಾಗಿ, ಸಾಹಿತಿಗಳಲ್ಲಿ ಮೇರು ಸಾಹಿತಿಯಾಗಿ ಮೆರೆಯುತ್ತಿದ್ದಾರೆ.
    ಸಮುದ್ರ ಮಾರ್ಗದಿಂದ ವ್ಯಾಪಾರದ ನೆಪದಲ್ಲಿ ಕುಯುಕ್ತಿಯಿಂದ ಬರುವ ಮತಾಂಧರನ್ನೂ ನಮ್ಮ ಧರ್ಮಕ್ಕೆ ಸೋಂಕು ತಗಲಿಸದಂತೆ ಹಿಮ್ಮೆಟ್ಟಬೇಕಿದೆ...ಆದರೆ ನಮ್ಮ ನಮ್ಮ ಜಾತಿಯ ಕೆಲವು ಸಂಕುಚಿತ ಅಂಶಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಈ ಅವಕಾಶವಾದಿಗಳು ವಿಷದಬೀಜ ಬಿತ್ತಿಬಿಡಬಹುದು.
    ಒಂದು ಪ್ರಶ್ನೆ ಸದಾ ನನ್ನನ್ನು ಕಾಡುತ್ತಿತ್ತು..ನಾವೇಕೆ ಇವರ ಹಾಗೆ ನಮ್ಮ ಧರ್ಮದ ಬಲವಂತ ಪ್ರಚಾರ ಮಾಡುತ್ತಿಲ್ಲ? ಅದಕ್ಕೆ ನಮ್ಮ ತಂದೆ ಶ್ಯಾಮಾಶರ್ಮರ ಉತ್ತರದಿಂದ ಸ್ವಲ್ಪ ಸಮಾಧಾನವಾಯಿತು.
    " ನಮ್ಮ ಸನಾತನ ಧರ್ಮಕ್ಕೆ ಮಾತೃಸ್ಥಾನ ಕೊಟ್ಟು ಗೌರವಿಸುತ್ತೇವೆ...ಮತ್ತೆ ತಾಯಿಯನ್ನು ಮಾರಿಕೊಳ್ಳುವುದೇ..?"ಐ