Wednesday, March 8, 2017

ಶಿಲೆಗಳು ಸಂಗೀತವಾ ಹಾಡಿದೆ (Hampi Vittala Temple)

 
       ವಿಠ್ಠಲಾಪುರ ನಮ್ಮೂರು. ತುಂಗಭಧ್ರಾನದಿ ಮತ್ತು ವಿಠ್ಠಲ ದೇವಸ್ಥಾನದ ಮಧ್ಯ ನಮ್ಮ ಮನೆ. ಬೆಣಚುಕಲ್ಲು, ಪೆಡಸುಕಲ್ಲು, ಬಳಪದಕಲ್ಲಿನಲ್ಲಿ ಆಡುತ್ತಲೇ ಬೆಳೆದವರು ನಾವು. ಕಲ್ಲು ಕೆತ್ತನೆಯೇ ನಮ್ಮ ಕುಲಕಸುಬು. ವಿಠ್ಠಲ ದೇವಾಲಯವನ್ನು ಕಟ್ಟಿದವರು ನಮ್ಮ ಹಿರಿಯರು.
ಈಗ ಶೃಂಗೇರಿ, ಮಧುರೈನಿಂದ ಬಂದ ಶಿಲ್ಪಿಗಳೂ ನಮ್ಮ ವಠಾರದಲ್ಲೇ ತಂಗಿದ್ದಾರೆ. ಕೃಷ್ಣದೇವರಾಯರ ಆದೇಶದಂತೆ ಈಗ ನಾವೆಲ್ಲಾ 'ಸರಿಗಮ'ಮಂಟಪ ನಿರ್ಮಿಸುತ್ತಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಕೆಲಸ ಮುಗಿದು ಬಿಡುತ್ತದೆ. ಹೊರಗಿನಿಂದ ಬಂದ ಶಿಲ್ಪಿಗಳಿಗೆ ಇಲ್ಲಿಯ ಶಿಲೆಗಳ ಪರಿಚಯುವುಸುದೂ ಸಹ ನನ್ನ ಜವಾ...ಬ್ದಾರಿಯಾಗಿ ಬಿಟ್ಟಿದೆ.
 
                 ಸಾಮಾನ್ಯ ನೋಡುಗರಿಗೆ ಈ ಕಲ್ಲು ಬಂಡೆಗಳೆಲ್ಲಾ ಒಂದೇ ತರಹ ಕಾಣಬಹುದು ಆದರೆ ಈ ಬಂಡೆಗಳ ಜೊತೆಗೇ ಉಸಿರಾಡುವ ನಮಗೆ ಇವುಗಳ ಸೂಕ್ಷ್ಮತೆ ಗೊತ್ತು. ನಾವು ವಿಜಯನಗರದ ಉದ್ದಗಲಕ್ಕೂ ಈಗ ಹುಡುಕುತ್ತಿರುವುದು "ಹೆಣ್ಣುಕಲ್ಲು" ಮತ್ತು "ಗಂಡುಕಲ್ಲು"!
ನಮ್ಮ ಹಿರಿಯ ಶಿಲ್ಪಿಗಳು ಹೇಳಿಕೊಟ್ಟ ವಿದ್ಯೆ ಇದೆಲ್ಲಾ. ಪ್ರತಿಯೊಂದು ಜೀವಕ್ಕೂ, ಕಣ ಕಣಕ್ಕೂ ಅದರದೇ ಆದ ತರಂಗಾಂತರವಿರುತ್ತದೆ. ನಮಗೂ ಹಾಗೇ..ನಮ್ಮ ನಮ್ಮ ದೇಹಕ್ಕೆ , ಮನಸ್ಸಿಗೆ ಒಂದು ತರಂಗಾಂತರವಿದೆ, ಆದರೆ ಅದನ್ನು ನಾವಾಗೇ ಕಂಡುಕೊಳ್ಳಬೇಕು...ಅದಕ್ಕೆ ಧ್ಯಾನ ಮುಖ್ಯ. ಅದಕ್ಕೆ ನಮಗೆಲ್ಲಾ ಧ್ಯಾನದಿಂದಲೇ ಪ್ರಾರಂಭವಾದ ತರಬೇತಿ. ನಾವೇನೋ ಸಜೀವಿಗಳು...ಆದರೆ ಕಲ್ಲುಗಳ ತರಂಗಾಂತರ?
ಮೊದಮೊದಲು ಇವೆಲ್ಲಾ ಸುಳ್ಳು ಎನಿಸಿತ್ತು. ಕಲ್ಲುಗಳಲ್ಲೂ ಹೆಣ್ಣು ಗಂಡು ಎಂಬ ಭೇಧವೇ! ಗಂಡು ಕಲ್ಲುಗಳಿಂದ ತಾಳವಾದ್ಯಗಳ ಧ್ವನಿ ಮತ್ತು ಹೆಣ್ಣು ಕಲ್ಲುಗಳಿಂದ ತಂತಿವಾದ್ಯಗಳ ಧ್ವನಿ ಬರುತ್ತದೆ.
 ಐವತ್ತಾರು ಸಂಗೀತ ಕಂಭಗಳ ಮಂಟಪವೊಂದನ್ನು ನಿರ್ಮಿಸುವ ‌ಹೊಣೆಹೊತ್ತು.. ಕೃಷ್ಣದೇವರಾಯರಿಗೆ ಅವರ ಇನ್ನೊಂದು ಯುಧ್ಧದ ವಿಜಯೋತ್ಸವದ ಸಂಧರ್ಭದಲ್ಲಿ ಉಧ್ಘಾಟನೆಗೆ ತಯಾರಾಗಿರುತ್ತದೆ ಎಂದು ಆಶ್ವಾಸನೆ ಕೊಟ್ಟಮೇಲೆ ನಮಗೆಲ್ಲಾ ಬಿಡುವೇ ಇಲ್ಲ. ಕೃಷ್ಣದೇವರಾಯರು ಬಹಮನಿ ತುರಕರೊಂದಿಗೆ ಯುಧ್ಧಕ್ಕೆ ಹೋದರೆ ನಮಗಿಲ್ಲಿ ಕಲ್ಲು ಬಂಡೆಗಳೊಡನೆ ಸಮರ.
ನಾಲ್ಕು, ಆರು ಸಂಗೀತದ ಕಲ್ಲು ಕಂಭಗಳನ್ನು ನಮ್ಮ ಪೂರ್ವಜರಾದ ಜಕಣಾಚಾರಿ, ಡಂಕಣಾಚಾರಿಯರು ಸೃಷ್ಟಿಸಿದ್ದರೆಂದು ಕೇಳಿದ್ದೆವು ಆದರೆ ಐವತ್ತಾರು ಕಂಭಗಳ ವಾದ್ಯವೃಂದ ಸೃಷ್ಟಿಮಾಡುವುದೆಂದರೆ ಸಾಮಾನ್ಯದ ಮಾತೇ? ಈ ಸಂಗೀತ ಸೃಷ್ಟಿಸುವ ಕಲ್ಲುಗಳನ್ನು ಎಲ್ಲಿ ಹುಡುಕುವುದು, ಹೇಗೆ ಕೆತ್ತುವುದು? ಬರಿ ಶಬ್ದ ಬಂದರೆ ಸಾಲದು, ಶೃತಿ, ಗಾನ ಮತ್ತು ಲಯಗಳನ್ನೊಳಗೊಂಡ ಸಪ್ತಸ್ವರಗಳ ಸಂಗಿತದ ಸೃಷ್ಟಿಯಾಗಬೇಕು.


              ಮೊದಲು ನಮಗೆಲ್ಲಾ ತಾಳವಾದ್ಯಗಳ ತರಂಗಾಂತರಗಳ ಕಲಿಕೆ ಶುರುವಾಯಿತು. ಪಂಚತಾಳ, ತಬಲಾ,ಮೃದಂಗ, ಜಲತರಂಗ ಮತ್ತು ಮದ್ದಳೆ ಇವುಗಳ ಧ್ವನಿ ತರಂಗಗಳನ್ನು ಏಕಾಗ್ರತೆಯಿಂದ ಕೇಳಿ, ಕಂಭಗಳನ್ನು ಇದೇ ನಿರ್ಧಿಷ್ಟವಾದ ಕಂಪನ ಬರುವವರೆಗೂ ಕೆತ್ತನೆ ನಡೆಸಬೇಕು. ಸುಮಾರು ವಾರಗಳ ಹುಡುಕಾಟದ ನಂತರ ಹದಿನೈದು ಅಡಿ ಎತ್ತರದ ಸುಮಾರು ಎಂಭತ್ತು ಕಂಭಗಳನ್ನು ವಿಠ್ಠಲ ಮಂದಿರದ ಆವರಣಕ್ಕೆ ಆನೆಗಳ ಸಹಾಯದಿಂದ ಸಾಗಿಸಲಾಯಿತು. ಪೂರ್ವನಿರ್ಧಾರಿತ ಯೋಜನೆಯಂತೆ ಮಂಟಪ ಮಧ್ಯದಲ್ಲಿ ಹದಿನಾರು ಕಂಭಗಳನ್ನು ಚೌಕಾಕಾರದಲ್ಲಿ ಸ್ಥಾಪಿಸಬೇಕು. ಇನ್ನು ನಲವತ್ತು ಕಂಭಗಳು ಮಂಟಪದ ಸುತ್ತಲೂ ಸ್ಥಾಪಿಸಬೇಕು. ಪ್ರತಿಯೊಂದು ಕಂಭವೂ ಹನ್ನೊಂದು ಅಡಿ ಹತ್ತು ಇಂಚಿನಂತೆ ಕೆತ್ತಿ ಇಡಲಾಯಿತು. ಪ್ರತಿಯೊಂದು ಕಂಬದ ಅನುರಣಿಯ ತರಂಗಾಂತರದ ಪ್ರಕಾರ ಸೂಕ್ಷ ಕೆತ್ತನೆಯನ್ನು ಹಿರಿಯ ಶಿಲ್ಪಿಗಳು ಮಾಡುತ್ತಿದ್ದಾರೆ..ಈ ಕೆಲಸಗಳೆಲ್ಲಾ ನಿಶಬ್ದ ವಾತಾವರಣದಲ್ಲಿ ನಡೆಯಬೇಕು. ಹಗಲೆಲ್ಲಾ ಸ್ಥೂಲಕಾರ್ಯಗಳು, ರಾತ್ರಿಯ ನೀರವತೆಯಲ್ಲಿ ವಾದ್ಯದ ತರಂಗ ಬರುವವರೆಗೂ ತದೇಕಚಿತ್ತತೆಯಲ್ಲಿ ಶಿಲ್ಪನಿರ್ಮಾಣ.
ಕೃಷ್ಣದೇವರಾಯರ ಇನ್ನೊಂದು ಯುಧ್ಧದಲ್ಲಿ ವಿಜಯಿಯಾಗಿ ಬರುತ್ತಿದ್ದಾರೆ ಎನ್ನುವ ಸಮಾಚಾರ ಬರುವುದಕ್ಕೂ ಎರಡು ದಿನ ಮುಂಚಿತವಾಗೇ ಮಂಟಪದ ನಿರ್ಮಾಣವನ್ನು ಮುಕ್ತಾಯಗೊಳಿಸಿ ರಾಯರ ಆಗಮನವನ್ನೇ ಎದಿರು ನೋಡುತ್ತಾ ಕುಳಿತಿದ್ದೇವೆ.