Thursday, November 10, 2016

ಪಾಂಡಿಚೆರಿಯ ಪ್ರಸಂಗಗಳು-5

        

ಪಾಂಡಿಚೆರಿ ತಲುಪಿದ ನಾಲ್ಕೇದಿನಕ್ಕೆ ದೀಪಾವಳಿ ಹಬ್ಬ. ಹಬ್ಬದ ಸಮಯದಲ್ಲಿ ಕಾರುಗಳ ಮಾರಾಟ ಎಷ್ಟು ಆಕರ್ಷಕವಾಗಿತ್ತೆಂದರೆ, ಒಂದು ವಿನಿಮಯ ಕೊಡುಗೆಯಲ್ಲಿ ಹಳೇ ಕಾರನ್ನು ಬದಲಿಸಿ ಒಂದು ಹೊಸ ಕಾರನ್ನು ಖರೀದಿಸಿಯೇ ಬಿಟ್ಟೆ. ತಮಿಳರ ಸಾಂಪ್ರದಾಯಕತೆಯ ಪರಿಚಯವೂ ಅದರೊಂದಿಗೆ ಪರಿಚಯವಾಯಿತು. 'ನೀವು ಪೂಜಾ ಡ್ರೈವ್ ಯಾವಾಗ ಮಾಡುತ್ತೀರಾ?' ಎಂದು Hyundi ನ ಅಂಬುಮಣಿ ಕೇಳಿದಾಗ ಒಂತರ ಮೋಜೆನಿಸಿತು. ಆದರೆ ಇವರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ರಾಹುಕಾಲವಿರಬಾರದು, ಮನೆದೇವರ ದೇವಸ್ಥಾನದಲ್ಲೇ ಕಾರಿನ ಪೂಜೆಯಾಗಬೇಕು, ಹಾಗೆ. ಮರುದಿನ ಸಾಯಂಕಾಲ ಐದು ಗಂಟೆಗೆ ಬರುತ್ತೇನೆ ಎಂದೆ‌. ಮನಸ್ಸಿನಲ್ಲಾಗಲೇ ನಿರ್ಧರಿಸಿದ್ದೆ, ಸಮುದ್ರತಟಕ್ಕೆ ಸಮಾನಾಂತರವಿರುವ ECR ಹೆದ್ದಾರಿಯಲ್ಲಿ ಒಂದು ಅರ್ಧಗಂಟೆ ಡ್ರೈವ್ ಮಾಡಿ ಒಂದು ಬೀಚಿನಲ್ಲಿ ಸೂರ್ಯಾಸ್ತ ವೀಕ್ಷಿಸಿ ವಾಪಾಸು ಬರುವುದೆಂದು. ಅದೆಂತಹ ಅಧ್ಭುತ ಅನುಭವ. ರಸ್ತೆಯ ಬಲಗಡೆ ಸಮುದ್ರತಟದ ಉದ್ದಕ್ಕೂ ಬಣ್ಣ ಬಣ್ಣದ ದೋಣಿಗಳು, ಸಂಜೆಯ ಪ್ರಶಾಂತವಾದ ನೀಲಿ ಸಮುದ್ರ. ಎಲ್ಲೆಲ್ಲೂ ಸುಂದರ ಪ್ರಕೃತಿಯದೇ ಕಾರುಬಾರು. ಎಡಬದಿಗೆ ಹಸಿರಿನ ಸಿರಿ. ತೆಂಗು, ಬಾಳೆ, ಭತ್ತಗಳ ದರ್ಬಾರು. ಅಲ್ಲಲ್ಲಿ ಸಣ್ಣ ಪುಟ್ಟ ಹಳ್ಳಿಗಳು, ಮೀನುಗಾರರ ಗುಡಿಸಲುಗಳು. ಹಿಂತಿರುಗಲು ಮನಸ್ಸಾಗುತ್ತಲೇ ಇಲ್ಲ, ಸೌಂದರ್ಯ ಆಸ್ವಾದನೆಯಲ್ಲಿ ಅದು ಯಾವಾಗ 'ಕಡ್ಡಲೂರಿಗೆ 'ಬಂದು ತಲುಪಿದೆನೋ ತಿಳಿಯಲೇ ಇಲ್ಲ. ಸರಿ ನನ್ನ ಪೂಜಾ ಡ್ರೈವ್ ಮುಗಿಯಿತು ಎಂದು ವಾಪಾಸಾದೆ. ಆಕಾಶದಿಂದ ಪಾಂಡಿಚೆರಿಯ ಸೌಂದರ್ಯವನ್ನು ಆಸ್ವಾದಿಸಿದೆ, ಈಗ ಭೂಮಿಯ ಮೇಲೂ ಒಂದು ಹಂತದ ಪರಿಚಯವಾಯಿತು, ಇನ್ನುಳಿದಿರುವುದು ಸಮುದ್ರದ ಮಾರ್ಗದ ಮುಖಾಂತರ, ಅದಕ್ಯಾವಾಗ ಗಳಿಗೆ ಕೂಡಿಬರುವುದೋ ಎಂದು ಯೋಚಿಸುತ್ತಿದ್ದೆ. ನಾನು ಹೋಗಲಿಲ್ಲ..ಅದೇ ಬಂತು!
 
     25 ಡಿಸಂಬರ್ ರಾತ್ರಿ ಆಶೋಕ ಹೋಟಲಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ ಎನ್ನುವ ಸಂದೇಶ ನನ್ನ ವಾಯುಸೇನೆಯ ಮಿತ್ರರಿಂದ ಬಂದ ಮೇಲೆ, ನಮ್ಮ ಶ್ರೀಮತಿಯವರೊಂದಿಗೆ ನಾವೂ ಕೂಡ ಒಂದು ರೆಸ್ಟೋರೆಂಟಿನಲ್ಲಿ ಸ್ಥಿತವಾದೆವು.  Seagull ರೆಸ್ಟೋರೆಂಟು ಸಮುದ್ರದ ಮೇಲೆ ಮರದ ದಿಮ್ಮಿಗಳ ಮೇಲೆ ಹಲಗೆಗಳನ್ನು ಪೇರಿಸಿ  ನಿರ್ಮಿಸಲಾಗಿದೆ‌. ಸಮುದ್ರದ ಅಲೆಗಳ ಶಬ್ದವೊಂದನ್ನು ಬಿಟ್ಟರೆ ಪ್ರಶಾಂತವಾದ ವಾತಾವರಣವೇ. ಅವತ್ತು ರಾತ್ರಿ ಹೆಚ್ಚು ಜನಸಂದಣಿ ಇರಲಿಲ್ಲ, ಹಾಗಾಗಿ ತಡರಾತ್ರಿಯವರೆಗೂ ಅಲ್ಲೇ ಕೂತಿದ್ದೆವು. It was a romantic evening!  ಅಲ್ಲಿಂದ ಹೊರಡುವಾಗ ಲೇಟಾಗಿತ್ತು. ಮರುದಿನದ sky diving ನ ಪ್ರದರ್ಶನವಿದ್ದುದರಿಂದ ಬೆಳಗಿನ ಫ್ಲೈಯಿಂಗ್ ಮಾಡುವುದು ಬೇಡ ಎನಿಸಿತು. ಅಂತೆಯೇ ನಮ್ಮ ತಾಂತ್ರಿಕ ತಂಡದ ಮುಖ್ಯಸ್ಥರಿಗೆ ಮೊಬೈಲಿನಲ್ಲಿ ವಿಷಯ ತಿಳಿಸಿದೆ.
     26  ಡಿಸೆಂಬರ್, ಬೆಳಗಿನ ಮೊದಲ ಕರೆ ಬಂದಿದ್ದು ಪಾಂಡಿಚರಿಯ ಲೆಫ್ಟಿನೆಂಟ್ ಗವರ್ನರ್ ಕಛೇರಿಯಿಂದ!
     ಅವರ ಕಾರ್ಯದರ್ಶಿ ಮಾತಾಡಿದರು, ಸಮುದ್ರತೀರದಲ್ಲಿ ಅತಿ ಉಬ್ಬರ ಬಂದು ನೀರು ಒಳ ಪ್ರದೇಶಗಳಿಗೆ ನುಗ್ಗಿದೆಯಂತೆ, ಕೆಲವು ಕಡೆ ಪ್ರಾಣಹಾನಿಯಾಗಿರುವ ಹೆದರಿಕೆಯೂ ಇದೆ, ಕೂಡಲೇ ಒಂದು ರೌಂಡು ವಾಯು ವೀಕ್ಷಣೆ ನಡೆಸಿ ವರದಿ ಕೊಡಲು ಸಾಧ್ಯವೇ ಎಂದರು. ಸರಿ ಆಗಬಹುದು ಎಂದು ಏರ್ಪೋರ್ಟಿನ ಕಡೆ ದೌಡಾಯಿಸಿದೆ. ಇದಾವುದರ ಅರಿವೇ ಇಲ್ಲದಂತೆ ಅಂದಿನ sky diving ಕಾರ್ಯಕ್ರಮವನ್ನು ನೋಡಲು ಜನಸಾಗರವೇ ಏರ್ಪೋರ್ಟಿನ ಸಮೀಪದ ಕ್ರೀಡಾಂಗಣದೆಡೆಗೆ ಹರಿದು ಬರುತ್ತಿದೆ. ಅಷ್ಟರಲ್ಲಿ ಒಂದು ವಿಡಿಯೋ ಕ್ಯಾಮರದ ಏರ್ಪಾಡು ಮಾಡಲು NCC ಅಧಿಕಾರಿಯೊಬ್ಬರಿಗೆ ತಿಳಿಸಿದೆ. ಅಷ್ಟೋತ್ತಿಗೆ ಸುಮಾರು ಒಂಬತ್ತು ಗಂಟೆ. ವಿಡಿಯೋ ಕ್ಯಾಮರ ಹಿಡಿದುಕೊಂಡು ಬಂದವರನ್ನೇ ಕೂರಿಸಿಕೊಂಡು ಗಗನಕ್ಕೇರಿದೆವು.
      ಏರ್ಪೋರ್ಟಿನ ಮತ್ತು ಸಮುದ್ರದ ಮಧ್ಯ ಇರುವ ಅಶೋಕ ಹೋಟಲಿನ ಮೇಲೆ ಹಾರಾಡುವಾಗ...ನೋಡೋಣ ನಮ್ಮ ಮಿತ್ರರಿಗೊಂದು ಸರ್ಪ್ರೈಸ್ ಕೊಡೋಣ ಎಂದು ಹೋಟಲಿನ ಟೆರೇಸಿನ ಮೇಲೆ ರೌಂಡು ಹೊಡೆಯೋಣ ಎನಿಸಿತು, ವಿಡಿಯೋ ರೆಕಾರ್ಡಿಂಗು ಮಾಡಿ ಎಂದೆ. ನೋಡಿದರೆ ಸಮುದ್ರದ ನೀರು ಹೋಟಲು ಸುತ್ತಲೂ ಆವರಿಸಿದೆ. ಟೆರೇಸಿನ ಮೇಲೆ ಜನರು ನಮ್ಮ ಕಡೆ ಕೈ ಬೀಸುತ್ತಿದ್ದಾರೆ! ಇನ್ನೂ ಸ್ವಲ್ಪ ಕೆಳಗೆ ಬಂದು ಸುತ್ತು ಹಾಕಿದೆ ಅನುಮಾನವೇ ಇಲ್ಲ ನಮ್ಮ ಏರ್ಫೋರ್ಸ್ ಮಿತ್ರರೂ ಅಲ್ಲಿದ್ದಾರೆ. ಇದೇನೋ ದೊಡ್ಡ ಅನಾಹುತ ಎಂದು ಮೊಟ್ಟ ಮೊದಲಿಗೆ ಅನಿಸಿತು. ಸಮುದ್ರದ ದೊಡ್ಡ ಅಲೆಗಳೇನು ಕಾಣಿಸಲಿಲ್ಲ ಆದರೆ ಸಮುದ್ರದ ಬಣ್ಣ ಕೆಂಪಾಗಿತ್ತು. ದೂರ ದೂರದ ವರೆಗೂ ಒಂದು ದೋಣಿಯೂ ಕಾಣಲಿಲ್ಲ. ಇಷ್ಟೊತ್ತಿಗೆ ಮೀನು ಹಿಡಿಯಲು ಹೋದ ದೋಣಿಗಳು ಮರಳುವ ಸಮಯ. ಏನೇಯಿತು ಈ ದೋಣಿಗಳಿಗೆ? ಸಮುದ್ರವನ್ನೇ ನೋಡುತ್ತಿದ್ದ ನಮಗೆ ಹೆದ್ದಾರಿಯ ಈ ಕಡೆ ನೋಡಿದರೆ
  ಇನ್ನೂ ಗೊಂದಲ ಹುಟ್ಟಿಸುವ ಕೆಲವು ದೃಷ್ಯಗಳು ಕಂಡು ಬಂದವು. ಬಣ್ಣ ಬಣ್ಣದ ದೋಣಿಗಳು ಹೆದ್ದಾರಿಯನ್ನು ದಾಟಿ ಆಕಡೆ ಚಲ್ಲಾಪಿಲ್ಲಿಯಾಗಿದ್ದವು. ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ನಮ್ಮ ಮಿತ್ರ ಒಂದೇ ಸಲ ಚೀತ್ಕರಿಸಿದರು ' ಸರ್ ಇಲ್ಲೊಂದು ಹಳ್ಳಿಯಿತ್ತು, ನಮ್ಮ ಸಂಬಂದಿಕರು ಇಲ್ಲೇ ಇದ್ದರು' ಇನ್ನೂ ಸ್ವಲ್ಪ ಕೆಳಗೆ ಬಂದೆವು ಆಗ ಆಯಿತು ನೋಡಿ ಪ್ರಕೃತಿ ವಿಕೋಪದ ಪರಿಚಯ,ಅದೇನು ಕ್ರೌರ್ಯರೂಪ. ನೆಲಸಮವಾದ ಗುಡಿಸಲುಗಳು,ಬಣ್ಣದ ಸೀರೆಯುಟ್ಟ ಹೆಣ್ಣುಮಕ್ಕಳ ಶವಗಳು,ಮುರಿದು ಬಿದ್ದ ತೆಂಗಿನ ಮರಗಳು, ಚೀರಾಡುತ್ತಿರುವ ಹಕ್ಕಿಗಳು,ದೇವರೇ ಇದಲ್ಲಾ ಸುಳ್ಳಾಗಿರಲಿ ಎಂದು ಪ್ರಾರ್ಥಿಸ ತೊಡಗಿದೆ. ಎನ್ನು ಐದು ನಿಮಿಷಗಳಲ್ಲಿ ಕಡಲೂರಿನ ಮೇಲೆ ಬಂದೆವು. ಅಲ್ಲಾಗಿದ್ದ ಜೀವರಾಶಿಯ ನಾಶವಂತೂ ಹೇಳತೀರದು. ಇಷ್ಟೊಂದು ರಕ್ತ ಕುಡಿದ ಸಮುದ್ರ ಕೆಂಪಾಗಿರದೆ ಇನ್ಹ್ಯಾಗಿರಲು ಸಾಧ್ಯ.
  ಪಾಂಡಿಚರಿ ಏರ್ಪೋರ್ಟಿಗೆ ಮರಳುವಷ್ಟೊತ್ತಿಗೆ ಗೊಂದಲ,ಖಿನ್ನತೆ ಮೈ ಮನಗಳನ್ನಾವರಿಸಿತ್ತು. ಅಷ್ಟೊತ್ತಿಗಾಗಲೇ ನಮ್ಮ ಏರ್ಫೋರ್ಸಿನ ಮಿತ್ರರನ್ನು ಸುರಕ್ಷಿತವಾಗಿ ಏರ್ ಪೋರ್ಟಿಗೆ ತರಲಾಗಿತ್ತು. ಹೆಲಕಾಪ್ಟರ್ ಪೈಲಟ್ಟುಗಳೂ ಬಂದರು. ಕಾರ್ಯಕ್ರಮವೆಲ್ಲಾ ರದ್ದಾಯಿತು. ಅದೇ ಹೆಲಿಕಾಪ್ಟರುಗಳನ್ನು ಪರಿಹಾರ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವ ಅನುಮತಿಯೂ ಬಂತು.
ಆಗಲೇ ಇನ್ನೊಂದು ಆಘಾತಕರ ಸುದ್ದಿ ,ಅಂಡಮಾನಿನ ವಾಯುನೆಲೆ 'ಕಾರ್ ನಿಕೋಬಾರ್' ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ ಎಂದು.
ಮೂರು ತಿಂಗಳ ನಂತರ ನಾನು ಅಂಡಮಾನಿಗೆ ಹೋದಾಗ ಕೇಳಿದ ನೈಜ ಘಟನೆಯ ಬಗ್ಗೆ ನಿಮಗೆ ಹೇಳಲೇಬೇಕು.
ಕಾರ್ನಿಕೋಬಾರಿನಲ್ಲಿ ಕೊಚ್ಚಿಕೊಂಡು ಹೋದ ವಾಯುಸೇನೆಯ ನೂರಕ್ಕೂ ಹೆಚ್ಚು  ಜೀವಗಳಲ್ಲಿ ,ಹನ್ನೊಂದು ವರ್ಷದ 'ಮಾಯಾ'ಎನ್ನುವ ಹುಡುಗಿ ಮುರಿದುಬಿದ್ದ ತನ್ನ ಮನೆಯ ಬಾಗಿಲನ್ನೇ ಬಿಗಿಯಾಗಿ ಹಿಡಿದು ಕೊಂಡಿತ್ತಂತೆ. ಕೆಲವು ಗಂಟೆಗಳನಂತರ ಪ್ರಙೆ ಬಂದು ಸುತ್ತಲಿನದೆಲ್ಲಾ ನಿಧಾನವಾಗಿ  ಅರಿವಾಗ ತೊಡಗಿತಂತೆ..ತಾನಿನ್ನೂ ಬದುಕಿದ್ದೇನೆ, ತನ್ನ ಮನೆಯ ಮುರಿದ ಬಾಗಿಲು ನನ್ನ ಜೀವ ಉಳಿಸಿದೆ ಮತ್ತು ಅದೇ ಬಾಗಿಲು ಕೆಲವು ಹಾವುಗಳೂ ಆಸರೆಯಾಗಿದೆ ಎಂದು. ಇದೇ ರೀತಿ ನನ್ನ ತಂದೆ ತಾಯಿಗಳೂ ಬದುಕಿರಬಹುದು ಎಂದು ಪ್ರಾರ್ಥಿಸುತ್ತಿರುವಾಗಲೇ ಒಂದು ಚಮತ್ಕಾರ ನಡೆಯುತ್ತದೆ. ಆಯಾಸದಿಂದ ಜೋಂಪು ಹೊಡೆಯುತ್ತಿದ್ದವಳು ಕಣ್ತೆರೆದಾಗ ಸಮುದ್ರ ತೀರದ ಮೇಲೆ ಮಲಗಿದ್ದಳಂತೆ. ಎದ್ದು ನಿಂತವಳಿಗೆ ಸ್ಥಳೀಯರು ಆಸರೆ ಕೊಟ್ಟು ಅಳಿದುಳಿದ ವಾಯುನೆಲೆಗೆ ತಲುಪಿಸಿದರಂತೆ. ಮುನಿಸಿನ ನಡುವೆಯೂ ಪ್ರಕೃತಿ ಒಂದು ಸಣ್ಣಗೆ ಮುಗುಳ್ನಕ್ಕ ಹಾಗೆ.