Sunday, November 19, 2017

ದೂರದಿಂದ ಬಂದವರು

ದೂರದಿಂದ ಬಂದವರು

      ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ ಕರೆಯುತ್ತಿದ್ದವರು...ದೂರದಿಂದ ಬಂದವರು. 

ತೀರ್ಥಹಳ್ಳಿಯ ಸಮೀಪದ ಕ್ಷೇಮಾಪುರದಿಂದ ವಿಜಯನಗರಕ್ಕೆ ಕಾಲುನಡಿಗೆಯಿಂದ ಬಂದವರಿಗೆ... ದೂರವೇ

‘ಸರಸ್ವತೀ..ಹೊರಡು ವಿಜಯನಗರಕ್ಕೆ ಹೋಗೋಣ, ಅಲ್ಲಿ ಸಂಗೀತದ ಮೂಲಕ ಶ್ರೀಹರಿಯ ಸೇವೆ ಮಾಡೋಣ ಎಂದಾಗ, ಸಂತೋಷದಿಂದ ನಾನೂ ಮಕ್ಕಳೊಂದಿಗೆ ಹೊರಟೇಬಿಟ್ಟೆ.
 ಇವರು ಶ್ರೀನಿವಾಸ ನಾಯಕರಾಗಿದ್ದಾಗ, ವಜ್ರದ ವ್ಯಾಪಾರಕ್ಕೆ ಬರುತ್ತಿದ್ದಾಗ ವಿಜಯನಗರದಲ್ಲಿ ಇವರ ಸಿರಿತನಕ್ಕೆ ತಕ್ಕಂತೆ ರಾಜಮರ್ಯಾದೆ ಸಿಗುತ್ತಿತ್ತಂತೆ. ಇವರು ನವಕೋಟಿ ನಾರಾಯಣರಾಗಿದ್ದುದೂ ಇಲ್ಲಿಂದಲೇ ತಾನೇ.

      ಕೃಷ್ಣದೇವರಾಯರ ಪಟ್ಟಾಭಿಷೇಕ ನಡೆದಾಗ ರಾಜ್ಯದ ಪರಿಸ್ಥಿತಿ ಇನ್ನೂ ಅತಂತ್ರದಲ್ಲಿತ್ತಂತೆ. ಒಳದಂಗೆ, ಉತ್ತರಕ್ಕೆ ಬಹಮನಿ ಮುಸ್ಲೀಮರ ಕಾಟ, ಖಾಲಿಯಾದ ಖಜಾನೆ, ಸಂಬಳವಿಲ್ಲದೆ ಅಧೀರರಾಗಿದ್ದ ಸೈನಿಕರು. ಪಟ್ಟಾಭಿಷೇಕ ಮಾಡಲೇ ಬೇಕಾದ ಅನಿವಾರ್ಯತೆ..ಹೊಂಚುಹಾಕುತ್ತಿದ್ದ   ಶತ್ರುಗಳಿಂದ ರಾಜ್ಯವನ್ನು ಉಳಿಸಿಕೊಳ್ಳಲು….ಎಂದೆಲ್ಲಾ ವಿಜಯನಗರದ ಪರಿಸ್ಥಿತಿಯನ್ನು ವಿವರಿಸುತ್ತಲೇ ಬಂದರು ಹಾದಿ ಉದ್ದಕ್ಕೂ.
       ಕೃಷ್ಣದೇವರ ಹೆಸರು ಹೇಳುತ್ತಲೇ ಇವರಿಗೆ ಎಲ್ಲಿಲ್ಲದ ಉತ್ಸಾಹ..
      'ಸರಸ್ವತಿ.. ಅಂತಹ ಎದೆಗಾರನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ' ಎಂದು ಅವರ ಸಾಹಸ, ಶೌರ್ಯಗಳ ವೃತ್ತಾಂತವನ್ನೇ ಬಿಚ್ಚಿಡುತ್ತಿದ್ದರು. 

ಕೃಷ್ಣದೇವರಾಯರ ಮೊದಲ ಆದ್ಯತೆ ಒಂದು ಒಳ್ಳೆಯ ಸೈನ್ಯಕಟ್ಟಬೇಕು, ಸೈನಿಕರ ತರಬೇತಿಗೆ, ಅರಬ್ಬೀ ದೇಶದ ಕುದುರೆಗಳನ್ನು, ದಕ್ಷಿಣದಿಂದ ಆನೆಗಳನ್ನು ತರಲು ಹಣದ ಕೊರತೆಯಿದ್ದಾಗ ನಮ್ಮವರಿಂದ ಆರ್ಥಿಕ ಸಹಾಯ ಪಡೆದರಂತೆ.ಸಹಾಯ ಉಹುಂ, ಇವರದು ಸಹಾಯಮಾಡುವ ಜಾಯಮಾನವೇ ಅಲ್ಲ..ಆಗ, ಶ್ರೀನಿವಾಸ ನಾಯಕರಾಗಿದ್ದಾಗ.., ಶುಧ್ಧ ವ್ಯವಹಾರದ ಲೆಕ್ಕಾಚಾರ.ಕೃಷ್ಣರಾಯರಿಂದಲೇ ಮುಂದೆ ವಿಜಯನಗರದ ಸಂಪತ್ತು ವೃಧ್ಧಿಸಲಿದೆ ಎನ್ನುವ ಬಲವಾದ ನಂಬಿಕೆ ಮತ್ತು ಆಗ ಬರಬಹುದಾದ ಇಮ್ಮಡಿ, ಮುಮ್ಮಡಿ ಗಾತ್ರದ ಲಾಭದ ಆಸೆ. ಅದು ಹಾಗೇ ಆಯಿತು ಕೂಡ. 'ಕುದುರೆ ಶೆಟ್ಟರು' ಎನ್ನುವ ವ್ಯಾಪಾರಿಗಳ ಗುಂಪಿಗೆ ಧಾರಾಳವಾಗಿ ಸಾಲ ಕೊಟ್ಟರಂತೆ. ಇವರು ಅರಬ್ಬೀ ದೇಶದಿಂದ ಕುದುರೆಗಳನ್ನು ತರಿಸಿ ವಿಜಯನಗರದ ಸೈನ್ಯಕ್ಕೆ ಕೊಡುತ್ತಿದ್ದರಂತೆ. ಮುಂದಿನ ಯುಧ್ಧಕ್ಕೆ ಸೈನ್ಯ ಸನ್ನಧ್ಧವಾಗಿದ್ದೇ ತಡ ಸಾಮ್ರಾಜ್ಯ ವಿಸ್ತರಣೆಯ ಪ್ರಕ್ರಿಯೆ ಶುರು. ಕೃಷ್ಣದೇವರಾಯರೇ ಮಂಚೂಣಿಯಲ್ಲಿ ನಿಂತು ವೀರಾವೇಷದಿಂದ ಕಾದಾಡಿ ಆ ಪ್ರಾಂತ್ಯದ ರಾಜರನ್ನು ಸೋಲಿಸಿ ಅಲ್ಲಿಯ ಸಂಪತ್ತನ್ನು ವಿಜಯನಗರದ ಬೊಕ್ಕಸಕ್ಕೆ ತುಂಬಿಸಿಬಿಟ್ಟಿರುತ್ತಿದ್ದರಂತೆ. ತೀರ್ಥಹಳ್ಳಿಯಿಂದ ಮುಂದಿನ ಸಲ ವಜ್ರದ ವ್ಯಾಪಾರಕ್ಕೆ ಹೋದಾಗ ಇಮ್ಮಡಿ ಗಾತ್ರದ ಧನರಾಶಿ ಇವರಿಗೆ ಖುದ್ದಾಗಿ ಕೃಷ್ಣದೇವರಾಯರೇ ಒಪ್ಪಿಸುತ್ತಿದ್ದರಂತೆ.

      ಅದೆಲ್ಲಾ ತುಂಬಾ ಹಳೆಯ ವಿಷಯ....'ನನ್ನ ಮೂಗುತಿಯ ಪ್ರಸಂಗದ' ನಂತರ ನಡೆದ ಘಟನಾವಳಿಗಳು ಜಗಜ್ಜಾಹೀರಾದ ಸಂಗತಿ. ಅದನ್ನೆಲ್ಲಾ ಇಲ್ಲೇನು ಹೇಳುವುದು? ಅದನ್ನೆಲ್ಲಾ ಬಿಚ್ಚುತ್ತಾ ಹೋದರೆ ವಿಜಯನಗರದ ವೃತ್ತಾಂತವೇ ಮರೆತು ಹೋಗುತ್ತದೇನೋ.

“ಆದದ್ದೆಲ್ಲಾ ಒಳಿತೇ ಆಯಿತು “..ಎಂದು ಎಂದು ಮೊಟ್ಟ ಮೊದಲಿಗೆ ಹಾಡಲು ಶುರು ಮಾಡಿಕೊಂಡಾಗ ನನಗೇ ಆಶ್ಚರ್ಯವಾಯಿತು...ಯಾರಾದರೂ ಈ ಹಂತಕ್ಕೆ ಬದಲಾಗುವುದು ಸಾಧ್ಯವೇ ಅಂತ.
ಇವರು ಇರುವುದೇ ಹಾಗೇ, ಏನು ಮಾಡಿದರೂ ಒಂದು ಹುಚ್ಚು,ತೀವ್ರತೆ ಮತ್ತು ಆಸ್ಥೆಯಿಂದ ಮಾಡುತ್ತಾರೆ. ವಜ್ರದ ವ್ಯಾಪಾರದಲ್ಲಿ, ಲೇವಾದೇವಿ ವ್ಯವಹಾರದಲ್ಲಿ  ಕೋಟಿ ಕೋಟಿ ಗಳಿಸಿದರು. ಆದರೆ ಇದಲ್ಲಾ ನಶ್ವರ..ಆ ಹರಿಯೇ ಎಲ್ಲಾ ಅಂದೆನಿಸಿದ ಕೂಡಲೇ ಕಿಂಚಿತ್ತೂ ಯೋಚಿಸದೆ ಎಲ್ಲವನ್ನೂ ತ್ಯಜಿಸಿ ಭಕ್ತಿಯಸಾಗರದಲ್ಲಿ ಮುಳುಗಿ ಹೋದರು.
      ಸದ್ಯ ಅಂತೂ ಇಲ್ಲಿಗೆ ಬಂದು ತಲುಪಿದೆವು. ಕೃಷ್ಣದೇವರಾಯರನ್ನು ಭೇಟಿ ಮಾಡಿದಾಗ ದೇವರಾಯರಿಗೆ ಎಲ್ಲಿಲ್ಲದ ಆಶ್ಚರ್ಯ 'ಏನು ಶ್ರೀನಿವಾಸ ನಾಯಕರೇ..ನನಗೇ ಸಾಲ ಕೊಡುವಷ್ಟು ಶ್ರೀಮಂತರಾಗಿದ್ದವರು ಎಲ್ಲವನ್ನೂ ತ್ಯಾಗಮಾಡಿ ಇದೇನು ಅವತಾರ?' ಎಂದಾಗ 'ನಿಮಗೆ ಬೇಕಾಗಿರುವುದು ರಾಜ್ಯ, ನನಗೆ ಹರಿ ಸ್ಮರಣೆಯಷ್ಟೇ ಸಾಕು..' ಎಂದುಬಿಡೋದೇ!
      ಮುಂದೆ ತಿರುಪತಿಯಿಂದ ವ್ಯಾಸತೀರ್ಥರನ್ನು ಮಹಾರಾಜರೇ ಕರೆದುಕೊಂಡು ಬಂದು 'ರಾಜಗುರು' ಪಟ್ಟವನ್ನಲಂಕರಿಸಲು ಮನವಿಮಾಡಿಕೊಂಡ ಮೇಲೆ ವ್ಯಾಸರು ಮಾಡಿದ ಮೊದಲ ಕಾರ್ಯವೆಂದರೆ ಇವರಿಗೆ 'ಪುರಂದರ ದಾಸ' ಎಂದು ದೀಕ್ಷೆ ಕೊಡಿಸಿದ್ದು.

 ನವರಾತ್ರಿಯ ಸಮಾರಂಭವನ್ನು ವಿದೇಶಗಳಲ್ಲೆಲ್ಲಾ ವರ್ಣಿಸಲಾಗಿದೆಯಂತೆ. ಅಂತಹ ಅಧ್ಭುತ ಅನುಭವದ ಮಧ್ಯದಲ್ಲೇ ಒಂದು ನವರಾತ್ರಿಯ ಸಮಾರಂಭದಂದು ನಮಗೇ ಎಂದು  'ಪುರಂದರ ಮಂಟಪ' ದ ಉಧ್ಘಾಟನೆಯಾಯಿತು. ತುಂಬಿ ಹರಿಯುತ್ತಿದ್ದ ತುಂಗಾನದಿಯ ತೀರದ ಪ್ರಶಾಂತವಾದ ವಾತಾವರಣದಲ್ಲಿ ಕಟ್ಟಿಸಿದ ಈ ವಿಶಾಲವಾದ ಮಂಟಪದಿಂದ ಎತ್ತ ನೋಡಿದರೂ ಪೃಕೃತಿಯ ವೈಭವ, ದೇವಸ್ಥಾನಗಳ ಗೋಪುರಗಳು, ಜುಳು ಜುಳು ಶಬ್ದದೊಂದಿಗೆ ಬೆರೆತು ಹೋಗುತ್ತಿದ್ದ ಹಕ್ಕಿಗಳ ಕಲರವ.
ಭಕ್ತಿ ಸಂಗೀತ ಅವಿರತವಾಗಿ ಹರಿಯಲು ಪ್ರಶಸ್ತ ಸ್ಥಳ.

ಅಂದಿನಿಂದ ಅಲ್ಲೇ ನಮ್ಮವಾಸ. ಅಲ್ಲಿಗೆ ಕನಕದಾಸರೂ ನಿಯಮಿತವಾಗಿ ಬರಲು ಪ್ರಾರಂಭಿಸಿದ ಮೇಲಂತೂ ಅದು ಭಕ್ತಿಯ ಕೇಂದ್ರವಾಯಿತು, ಹರಿಭಜನೆಯ ಬೀಡಾಯಿತು. ಕೆಲವು ಸಲ ಕೃಷ್ಣದೇವರಾಯರೂ ಇದರಲ್ಲಿ ಭಾಗವಹಿಸುತ್ತಿದ್ದರು. ದಕ್ಷಿಣದ ತುದಿಯಿಂದ ಕೃಷ್ಣ ಗೋದಾವರಿಗಳನ್ನು ದಾಟಿ ಕಳಿಂಗದ ದೇಶದ ವರೆಗೂ ಹರಡಿರುವ ಸಾಮ್ರಾಜ್ಯದ ಅಧಿಪತಿ...ಪುರಂದರ ಮಂಟಪದಲ್ಲಿ ಒಬ್ಬ ಸಾಮಾನ್ಯ ಭಕ್ತರಂತೆ ಕುಳಿತು ಇವರ ಗಾನಸುಧೆಯಲ್ಲಿ ಮಿಂದು ಹೋಗುತ್ತಿದ್ದರು.
      'ಕನ್ನಡ ರಾಜ್ಯ ರಮಾರಮಣ' ಬಿರುದು ಪಡೆದ ಅಪ್ರತಿಮ ವೀರನನ್ನೂ ಭಕ್ತಿಯ ಹೊಳೆಯಲ್ಲಿ ಮೀಯಿಸಿ ಬಿಡುತ್ತಿದ್ದವು ಪುರಂದರ ದಾಸರ ಕೀರ್ತನೆಗಳು.     

ಕಾಲಚಕ್ರ...ಉರುಳುತ್ತಾ ಮುಂದೊಂದು ದಿನ ವಿಜಯ ವಿಠ್ಠಲನ ಮೂರುತಿಯನ್ನು ಇದೇ ಮಂಟಪದಲ್ಲಿ ರಕ್ಷಿಸುವ ದುರ್ವಿದಿಯೂ ಬಂದೆರಗಿತು. ಕೃತಜ್ಞತಾ ಭಾವದಿಂದ ವಿಠ್ಠಲನ ಆರಾಧಕರಿಗೆ ಅರ್ಪಪಿಸಿದ ಈ ಮಂಟಪವೇ ವಿಠ್ಠಲ ಮೂರುತಿಗೆ ಆಸರೆಯಾಯಿತು..

ದೂರದಿಂದ ಬಂದಿದ್ದಕ್ಕೂ ಸಾರ್ಥಕವಾಯಿತು.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಷೇಶ ಅಶ್ವಾರೂಢರ ದಳವಿತ್ತು.   ಸೈನ್ಯಾದಿಕಾರಿಗಳ,  ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ,ಮಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ.

ಮೊದಲನೆ ವಿಶ್ವಯುಧ್ಧದ ಅಲೆಯಾಗಲೇ ಎದ್ದಾಗಿತ್ತು. ಯೂರೋಪಿನ, ಆಫ್ರಿಕಾದೆಲ್ಲೆಡೆ ಸೈನ್ಯದ ಜಮಾವಣೆ ಭರದಿಂದ ಸಾಗುತ್ತಿತ್ತು. ಇದೇ ಸಮಯದಲ್ಲಿ ಬ್ರಿಟಿಷರು ಮೈಸೂರಿನ ಅಶ್ವಾರೂಢರೊಂದಿಗೆ, ಜೋಧಪುರ ಮತ್ತು ಹೈದರಾಬಾದಿನ ಅಶ್ವಾರೂಢರನ್ನು ಸೇರಿಸಿ ಮೇಜರ್ ದಲಪತ್ ಸಿಂಗ್ ಶೆಖಾವತ್ತರ ನೇತೃತ್ವದಲ್ಲಿ 33 ಹಡಗುಗಳಲ್ಲಿ ಭಾರತದ ಅಶ್ವಾರೂಢ ದಳವನ್ನು ಈಜಿಪ್ಟಿಗೆ ರವಾನಿಸಿ ಬಿಡುತ್ತಾರೆ.

ಈಜಿಪ್ಟಿನ ಸೂಯೆಜ್ ಕಾಲುವೆ ಅತ್ಯಂತ ಮಹತ್ತರ ಜಲಸಂಪರ್ಕದ ಕೊಂಡಿ. ಅದಕ್ಕೆ ನಿರಂತರ ರಕ್ಷಣೆ ನೀಡಲು ಮೈಸೂರಿನ ಆ ಅಶ್ವದಳದ ಸೇನೆಯನ್ನು ನಿಯೋಜಿಸಲಾಗಿತ್ತು. ಸುಮಾರು ಮೂರು ವರ್ಷಗಳ ಯಶಸ್ವೀ ಕಾರ್ಯ ನಿರ್ವಹಿಸಿದ ಈ ಮೈಸೂರಿನ ತಂಡಕ್ಕೆ
1918 ರ ಸೆಪ್ಟೆಂಬರಿನಲ್ಲಿ ಇನ್ನೊಂದು ಮಹತ್ತರ ಕಾರ್ಯಾಚರಣೆಯನ್ನು ವಹಿಸಲಾಗಿತ್ತು. ಅದೇ "ಹೈಫಾ" ಬಂದರನ್ನು ತುರುಕರಿಂದ ವಶಪಡಿಸಿಕೊಳ್ಳುವುದು.

ಸುಮಾರು 400 ವರ್ಷಗಳಿಂದ ತುರ್ಕಿಯ  ಒಟ್ಟೊಮನ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಈ ಮುಖ್ಯ ಬಂದರನ್ನು ವಶಪಡಿಸಿಕೊಳ್ಳುವುದು ಬ್ರಿಟಿಷರ ಕದನತಂತ್ರದ ಬಹು ಮುಖ್ಯವಾದ ಅಂಗವಾಗಿತ್ತು . ಹೈಫಾ ಬಂದರಿನ ಭೌಗೋಳಿಕ ಪ್ರಾಮುಖ್ಯತೆಯನ್ನರಿತಿದ್ದ ಜರ್ಮನರು ಮತ್ತು ತುರುಕರು ಅಲ್ಲಿ ರಕ್ಷಣಾಪಡೆಗಳ ಕೋಟೆಯನ್ನೇ ನಿರ್ಮಿಸಿದ್ದರು. ಒಂದು ಕಡೆ ನದಿ, ಗುಡ್ಡಗಳ ಸಾಲು ಮತ್ತು ಪಶ್ಚಿಮಕ್ಕೆ ಸಮುದ್ರ. ಬೆಟ್ಟಗಳ ಮೇಲೆ ನೆಲೆಸಿದ್ದ ತುರುಕರ  ಸೈನ್ಯ  ಮತ್ತು ಜರ್ಮನರ ಮಷೀನು ಗನ್ನುಗಳು ನಾಲ್ಕೂಕಡೆ ಶತ್ರುಗಳ ಚಲನವಲನಗಳನ್ನು ಗಮನಿಸುತ್ತಿದ್ದರು, ಹಾಗಾಗಿ ಈ ಬಂದರನ್ನು ವಶಪಡಿಸುವುದಿರಲಿ ಒಬ್ಬಬ್ಬರಾಗಿ ಪ್ರವೇಶಿಸುವದೂ ಕಷ್ಟಸಾಧ್ಯವಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಮಷೀನು ಗನ್ನುಗಳ ಪೋಸ್ಟ್, ಮತ್ತು ಮದ್ದು ಗುಂಡುಗಳ ಉಗ್ರಾಣಗಳನ್ನು ನಿರ್ಮಿಸಲಾಗಿತ್ತು.

ಬ್ರಿಟಿಷರು ಇನ್ನೇನು ಮಾಡುವುದು ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಮೇಜರ್ ದಲಪತ್ ಶೆಖಾವತ್ತರು ತಮ್ಮ ಯುಧ್ಧತಂತ್ರವನ್ನು ಜನರಲ್ ಗಳಿಗೆ ವಿವರಿಸುತ್ತಾರೆ. ಅದರಂತೆ ಅಶ್ವರೂಢರ ಒಂದು ಪಡೆ 'ಮೌಂಟ್ ಕಾರ್ಮೆಲ್ಲ್' ಒಂದು ಗುಡ್ಡವನ್ನು ಕ್ಷಿಪ್ರವಾಗಿ ಹಿಂದಿನಿಂದ ಹತ್ತಿ ಅಲ್ಲಿಯ ಮಷೀನು ಗನ್ನುಗಳನ್ನು ವಶಪಡಿಸಿ ಕೊಳ್ಳುವುದು. ಬೆಟ್ಟದ ಮೇಲಿನ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಸಿಗ್ನಲ್ ಸಿಗುತ್ತಿದ್ದಂತೇ ಮೈಸೂರಿನ ಅಶ್ವಾರೂಢ ಪಡೆ  ನಗರದ ಮುಖ್ಯದ್ವಾರದಿಂದ ಮಿಂಚಿನಂತೆ ನಾಗಾಲೋಟನಡೆಸಿ ಅಲ್ಲಿಯ ಸೈನಿಕರ ಮೇಲೆ ಹಲ್ಲೆ ನಡೆಸುವುದು.  ಅಶ್ವರೂಢ ಸೈನಿಕರು ಬರೀ ಭರ್ಚಿ ಮತ್ತು ಖಡ್ಗಗಳೊಂದಿಗೆ ಮಷೀನು ಗನ್ನುಗಳ ವಿರುದ್ಧದ ಸಮರ !
23 ಸೆಪ್ಟಂಬರ್ ಪೂರ್ವ ನಿಯೋಜಿತ ತಂತ್ರದಂತೆ ಅಶ್ವಾರೂಢರ ಮಿಂಚಿನ ದಾಳಿ ನಡೆದೇ ಬಿಟ್ಟಿತು. ಕುದುರೆಗಳ ನಾಗಾಲೋಟದ ಈ ದಾಳಿಯಿಂದ ಕಕ್ಕಾಬಿಕ್ಕಿಯಾಗಿ ತುರುಕರ ಮತ್ತು ಜರ್ಮನರ ಸೈನಿಕರು ಮಷೀನು ಗನ್ನುಗಳ ದಾಳಿ ನಡೆಸಿದರೂ, ನಿರಂತರವಾಗಿ ಬರುತ್ತಿದ್ದ ಕುದುರೆ ಪಡೆಗಳನ್ನು ನೋಡಿ ಓಡಲು ಶುರುಮಾಡಿದರು.
ಕೆಲವೇ ಘಂಟೆಗಳಲ್ಲಿ ಹೈಫಾ ಬಂದರು ನಗರ ಬ್ರಿಟಿಷರ ವಶವಾಯಿತು. ಮುಂದೆ 1948 ರಲ್ಲಿ ಇಸ್ರೇಲಿನ ಸ್ಥಾಪನೆಯಾದನಂತರ ಇಸ್ರೇಲಿನ ಪ್ರಮುಖ ಬಂದರು ನಗರವಾಯಿತು. ಈ ಕಾರ್ಯಾಚರಣೆಯಲ್ಲಿ ಮೇಜರ್ ದಲಪತ್ ಶೆಖಾವತ್ತರು ವೀರಮರಣವನ್ನಪ್ಪಿದರು. ಮೈಸೂರಿನ ಹಲವಾರು ಅಶ್ವಾರೋಹಿ ಸೈನಿಕರೂ ಸಹ ಹತವಾದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಸ್ರೇಲಿನ ಭೇಟಿಯ ಸಮಯದಲ್ಲಿ ಈ ಸ್ಮಾರಕಕ್ಕೆ ಭೇಟಿನೀಡಿ ಗೌರವ ಸಲ್ಲಿಸಿದರು.
ಇಸ್ರೇಲಿನ ಪಠ್ಯ ಪುಸ್ತಕಗಳಲ್ಲಿ ಈ ವೀರಗಾಥೆಯನ್ನು ಇಲ್ಲಿಯ ಮಕ್ಕಳಿಗೆ ಪರಿಚಯಿಸಲಾಗುತ್ತಿದೆ.

ಇಸ್ರೇಲಿನ ಸರ್ಕಾರ ಈಗ ಈ ಮೈಸೂರಿನ ಸಾಹಸೀ ಅಶ್ವಾರೂಢರ ಗೌರವಾರ್ಥವಾಗಿ ಸ್ಟ್ಯಾಂಪೊಂದನ್ನೃ ಬಿಡುಗಡೆ ಮಾಡಿದ್ದಾರೆ.

ಇಸ್ರೇಲಿನಂತಹ ವೀರರ ನಾಡಿನಲ್ಲಿ ನಮ್ಮ ನಾಡಿನ ಶೂರರೂ ಪ್ರದರ್ಶಿಸಿದ ಪರಾಕ್ರಮ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ?

✍....ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com