ಮೂಲತಃ ನಾವು ವಿಜಯನಗರದಲ್ಲಿ ಸಾಂಬಾರ ದಿನಸಿಗಳ ವ್ಯಾಪಾರ ಮಾಡುತ್ತಿದ್ದೆವು. ಸುತ್ತ ಮುತ್ತಲಿನ ಪ್ರದೇಶಗಳಿಂದ ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗಗಳನ್ನೆಲ್ಲಾ ಸಂಗ್ರಹಿಸಿ ಭಟ್ಕಳಕ್ಕೆ ಸಾಗಿಸಿ ಅಲ್ಲಿಯ ಮಾಪಿಳ್ಳರ ಮುಖಾಂತರ ಅರಬ್ಬೀ ದೇಶದ ಮತ್ತು ಪೋರ್ಚುಗೀಸಿನ ವರ್ತಕರಿಗೆ ಮಾರಾಟ ಮಾಡುತ್ತಿದ್ದೆವು. ಸಂಪಾದನೆಯೇನೋ ಚೆನ್ನಾಗೇ ಇತ್ತು. ನಮ್ಮ ತಂದೆ ರಾಮಲಿಂಗ ಶೆಟ್ಟರು ವ್ಯಾಪಾರ ವಲಯದಲ್ಲಿ ನಂಬಿಕಸ್ಥ ಮರ್ಯಾದಸ್ಥ, ಯಾರಿಗೂ ಮೋಸಮಾಡುವವರಲ್ಲ ಎನ್ನುವ ಹೆಸರು ಗಳಿಸಿದ್ದರು. ಆಗ ಒಂದು ಅಂದಾಜಿನ ಪ್ರಕಾರ ಸುಮಾರು ಇನ್ನೂರಕ್ಕೂ ಹೆಚ್ಚು ಬಂದರುಗಳಿದ್ದವಂತೆ ವಿಜಯನಗರ ಸಾಮ್ರಾಜ್ಯದಲ್ಲಿ. ಈ ಬಂದರುಗಳಲ್ಲಿ ಮಾಪಿಳ್ಳರದೇ ಮೇಲುಗೈ. ಇವರಲ್ಲಿ ಎರಡು ತರಹದ ಮಾಪಿಳ್ಳರಿದ್ದಾರೆ. ತಲತಲಾಂತರದಿಂದಲೂ ಅರಬ್ ವ್ಯಾಪಾರಿಗಳಿಗೆ ದುಬಾಷಿಗಳಾಗಿ, ದಲಾಲಿಗಳಾಗಿ ವ್ಯವಹರಿಸುತ್ತಿದ್ದ ಮುಸ್ಲೀಮ್ ಮಾಪಿಳ್ಳರು. ಇತ್ತೀಚಿಗೆ ಮತಾಂತರಗೊಂಡ ಕ್ರಿಶ್ಚಿಯನ್ ಮಾಪಿಳ್ಳರು. ಇವರನ್ನು ನಸರಾಣಿ ಮಾಪಿಳ್ಳರೂ ಅಂತಲೂ ಕರೆಯುತ್ತಾರೆ. ಈ ನಸರಾಣಿ ಮಾಪಿಳ್ಳರು ಪೋರ್ಚುಗೀಸರಿಗೆ ಹತ್ತಿರವಾದರು.


ಕೃಷ್ಣದೇವರಾಯರ ಪಟ್ಟಾಭಿಷೇಕವಾದ ಮೇಲೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಗೋವಾದ ಬಂದರಿಗೆ ಬಂದಿಳಿದ ಕುದುರೆಗಳನ್ನು ಬಹಮನಿ ಸುಲ್ತಾನರ ಕಡೆಗೆ ಹೋಗದ ಹಾಗೆ ನೋಡಿಕೊಳ್ಳುವುದು ಮತ್ತು ಆ ಎಲ್ಲಾ ಕುದುರೆಗಳೂ ವಿಜಯನಗರದ ಸೈನ್ಯಕ್ಕೆ ಸೇರುವ ವ್ಯವಸ್ಥೆಯಾಗುವಂತೆ ಪೋರ್ಚುಗೀಸರ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಪೋರ್ಚುಗೀಸರಿಗೂ ಇವರ ಸೈನ್ಯದ ನೆರವು ಬೇಕಿತ್ತು ಹಾಗಾಗಿ ಒಂದು ಸಮತೂಲವಾದ ಒಪ್ಪಂದ ಮಾಡಿಕೊಂಡರು.
ಧರ್ಮಭೀರುವಾದ ಕೃಷ್ಣದೇವರಿಗೆ ಚೆನ್ನಾಗಿ ಅರಿವಿತ್ತು ಪೋರ್ಚುಗೀಸರ ಹುನ್ನಾರ...ಇವರು ಬರೀ ವ್ಯಾಪಾರಕ್ಕೆಂದು ಬಂದವರಲ್ಲ. ಒಂದು ಕೈಯಲ್ಲಿ ಶಿಲುಬೆ ಒಂದು ಕೈಯಲ್ಲಿ ಖಡ್ಗ ಹಿಡಿದುಕೊಂಡೇ ಗೋವಾಕ್ಕೆ ಪ್ರವೇಶಿಸಿದ ಇವರು ಹಿಂದೂಗಳ ಮೇಲೆ ನಡೆಸಿದ ಮತಾಂತರ, ದೌರ್ಜನ್ಯದ ಬಗ್ಗೆ ಮಾಹಿತಿಯಿತ್ತು. ಆದರೆ ಗೋವಾದಲ್ಲಿ ಬಹಮನಿ ಸುಲ್ತಾನರನ್ನು ಸೋಲಿಸಿದ ಪೋರ್ಚುಗೀಸರು...ಶತ್ರುಗಳ ಶತ್ರುಗಳು..ಸದ್ಯಕ್ಕೆ ಮಿತ್ರರು!

ವಿಜಯನಗರದಲ್ಲಿ ನಡೆಯುತ್ತಿರುವ ಹಾಗುಹೋಗುಗಳ ಬಗ್ಗೆ ನಿಗಾ ಇಡಲು ಪೋರ್ಚುಗೀಸರು ಲೂಯಿಸ್ ಎನ್ನುವ ರಾಯಭಾರಿಯನ್ನು ಕಳುಹಿಸಿದ್ದರು ಆದರೆ ಕೆಲವು ತಿಂಗಳುಗಳಲ್ಲಿ ಇವರು ಅನುಮಾನಾಸ್ಪದ ಸಂದರ್ಭದಲ್ಲಿ ಹತರಾದರು. ಮುಸ್ಲೀಮರ ಯುವಕನೊಬ್ಬ ಇವರನ್ನು ಹತ್ಯೆಗೈದು ತಪ್ಪಿಸಿಕೊಂಡು ಓಡಿಹೋಗಿದ್ದಾನೆಂಬ ಮಾಹಿತಿ ಗೋವಾಕ್ಕೆ ಮುಟ್ಟಿಸಲಾಯಿತು. ಆದರೆ ನಡೆದಿದ್ದೇ ಬೇರೆ. ಗೋವಾದಿಂದ ಕುದುರೆಗಳು ಬೇರಲ್ಲಿಗೋ ರವಾನೆಯಾಗಿ ಅಂತಿಮವಾಗಿ ಬಹಮನಿ ತುರುಕರ ಕೈವಶವಾಗುತ್ತಿವೆ ಎಂಬ ಮಾಹಿತಿ ಬೇಹುಗಾರರ ಮೂಲಕ ಕೃಷ್ಣದೇವರಾಯರಿಗೆ ವಿಷಯ ತಿಳಿಯಿತು. ಹೊನ್ನಾವರ ಮತ್ತು ಭಟ್ಕಳದ ಸಾಮಂತರ ಜೊತೆ ಈ ವಿಷಯವನ್ನು ನಿಷ್ಕರ್ಶಿಸಿ ಒಂದು ವ್ಯೂಹದ ರಚನೆ ಮಾಡಿದ್ದರು. ವಿಜಯನಗರಕ್ಕೆ ಬೇಕಾದ ಇಪ್ಪತ್ತು ಸಾವಿರ ಕುದುರೆಗಳು ದೊರತಕೂಡಲೇ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸುವುದು. ಇದಕ್ಕೆಂದೇ ಹಲವಾರು ಸಾಮಂತರಿಗೆ ಸೇನೆಯ ಅವಶ್ಯಕತೆಯ ಪಟ್ಟಿಯನ್ನಾಗಲೇ ಗುಪ್ತವಾಗಿ ಕಳುಹಿಸಿ ಕೊಟ್ಟಿದ್ದರಂತೆ. ಆದರೇ ಈ ವಿಷಯ ಹೇಗೋ ರಾಯಭಾರಿಗೆ ಗೊತ್ತಾಗಿಬಿಟ್ಟಿದೆ. ಇನ್ನೇನು ಗೋವಾದ ವೈಸರಾಯಿಗೆ ಈ ವಿಷಯ ರವಾನಿಸುವುದರಲ್ಲೇ ಇದ್ದರು ಅವರೇ ರವಾನಿಯಾಗಿ ಬಿಟ್ಟರು!