Monday, November 20, 2017

ಸೂರ್ಯನ ಪ್ರಖರತೆಗೆ ಪರವಾನಗಿಯೇ

ಸೂರ್ಯನ ಪ್ರಖರತೆಗೆ ಪರವಾನಗಿಯೇ?

ಜುಲೈ 1893 ನಲ್ಲಿ ಕೆನಡಾದ ವ್ಯಾಂಕೂವರ್ ತಲುಪಿದ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಚಿಕಾಗೋ ನಗರಕ್ಕೆ ಪ್ರಯಾಣ ಬೆಳಸುತ್ತಾರೆ.
World Parliament of Religions ಎನ್ನುವ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸುವ ಉತ್ಸಾಹ ಕಣಕಣದಲ್ಲೂ ನರ್ತಿಸುತ್ತಿತ್ತು.

ಅಮೆರಿಕಾದಲ್ಲಿ New Religion Movement ನ ಆಯೋಜನೆಯಲ್ಲಿ ನಡೆಯುತ್ತಿದ್ದ ಒಂದು ವಿನೂತನ ಧಾರ್ಮಿಕ ಪ್ರಯೋಗವಿದು. ಅಮೆರಿಕದ ಅಸ್ತಿತ್ವದ 400 ವರ್ಷಗಳ ಸಂಭ್ರಮ.
ರೋಮನ್ ಕ್ಯಾಥೋಲಿಕ್ ಧರ್ಮದಿಂದ ದೂರಾಗಿ ತಮ್ಮದೇ ಆದ ಹೊಸ ಕ್ರಿಶ್ಚಿಯನ್ ಮತವನ್ನು ಸ್ಥಾಪಿಸಿದ್ದ Swedenborgian ಎನ್ನುವ 'ನೂತನ ಮತಕೂಟ" ಇದರ ನಿರ್ವಹಣೆಯನ್ನು ವಹಿಸಿಕೊಂಡಿದ್ದರು.
ವಿಶ್ವದಾದ್ಯಂತ ಹರಡಿರುವ ಎಲ್ಲಾ ಜಾತಿ, ಮತ ಮತ್ತು ಧರ್ಮದ ಸಮಾವೇಶದಲ್ಲಿ ಸುಮಾರು 7000 ಧಾರ್ಮಿಕ ಗುರುಗಳನ್ನು ಆಮಂತ್ರಿಸಲಾಗಿತ್ತು.

ವ್ಯಾಂಕೂವರಿನಿಂದ ಚಿಕಾಗೋಕ್ಕೆ ಪ್ರಯಾಣಿಸುತ್ತಿರುವಾಗ ರೈಲಿನಲ್ಲಿ ಇವರಿಗೆ ಕೇಟ್ ಸ್ಯಾನ್ಬೋರ್ನ್ ಎನ್ನುವ ಮಹಿಳೆಯ ಪರಿಚಯವಾಗುತ್ತದೆ. ಸುಮಾರು ಐವತ್ತೈದರ ಈ ಮಹಿಳೆ ಉಪನ್ಯಾಸಕಿ, ಬರಹಗಾರ್ತಿ ಮತ್ತು ಸಮಾಜ ಸೇವಕಿ.
ವಿವೇಕಾನಂದರ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾರೆ, ಅವರ ಭಾಷಾ ಜ್ಞಾನಕ್ಕೆ ಅಚ್ಚರಿಗೊಳ್ಳುತ್ತಾರೆ, ಜ್ಞಾನದ ಅಗಾಧತೆಗೆ ಮರುಳಾಗುತ್ತಾರೆ. ಚಿಕಾಗೋದಲ್ಲಿ ಸಮಾರಂಭ ಮುಗಿದ ಮೇಲೆ ಬೋಸ್ಟನ್ ನಗರ ಸಮೀಪದ ತಮ್ಮ ತೋಟದ ಮನೆಗೆ ಬರಲು ನಿಮಂತ್ರಣ ಕೊಟ್ಟು ತಮ್ಮ ವಿಳಾಸ ಪತ್ರವನ್ನು ಕೊಡುತ್ತಾರೆ.

ಚಿಕಾಗೋ ತಲುಪಿದ ವಿವೇಕಾನಂದರಿಗೆ ಆಘಾತಗಳ ಸರಮಾಲೆ ಕಾದಿರುತ್ತದೆ. ಮೊದಲನೆಯದು ಸಮ್ಮೇಳನವನ್ನು ಸೆಪ್ಟಂಬರಿಗೆ ಮುಂದೂಡಲಾಗಿದೆ, ಅಂದರೆ ಎರಡು ತಿಂಗಳುಗಳು ಅಮೆರಿಕಾದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಅವರನ್ನು ಬೆಚ್ಚಿಬೀಳಿಸಿದೆ ವಿಷಯವೆಂದರೆ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವರ ದೇಶದ ಪ್ರತಿಷ್ಟಿತ ಸಂಸ್ಥೆಗಳ, ವ್ಯಕ್ತಿಗಳ ಪರಿಚಯ ಮತ್ತು ಪರವಾನಗಿಯ ಪತ್ರ ಹೊಂದಿರಬೇಕು, ಇಲ್ಲದಿದ್ದರೆ ನೊಂದಣಿ ಮಾಡಿಕೊಳ್ಳುವುದಿಲ್ಲ. ಅಷ್ಟಕ್ಕೂ ನೊಂದಣಿಯ ದಿನಾಂಕವಾಗಲೇ ಮಿಗಿದು ಹೋಗಿದೆ. ಇದೆಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ ಕೆಲವೇ ದಿನಗಳಿಗಾಗುವಷ್ಟು ಹಣ ಮಾತ್ರ ಉಳಿದಿತ್ತು. ಪ್ರೇಕ್ಷಕನಾಗಿ ಸಮ್ಮೇಳನದಲ್ಲಿ ಭಾಗವಹಿಸಲಾದರೂ ಎರಡು ತಿಂಗಳಿಗಾಗುವಷ್ಟು ಹಣವಂತೂ ಇರಲಿಲ್ಲ. ಚಿಕಾಗೋದಂತಹ ದುಬಾರಿ ನಗರದಲ್ಲಿರುವುದಕ್ಕಿಂತ ಬೋಸ್ಟನ್ನಿಗೆ ಹೋದರೆ ಸ್ವಲ್ಪ ಹಣ ಉಳಿಸಬಹುದೆಂಬ ಸಲಹೆಯಂತೆ ಅಲ್ಲಿಗೆ ಪ್ರಯಾಣ ಬೆಳಸಿದರು.

ಎಲ್ಲೆಡೆ ನಿರಾಸೆಯ ದಟ್ಟ ಮೋಡಗಳು. ವಿಶ್ವಮಟ್ಟದಲ್ಲಿ ವೇದ ಉಪನಿಷತ್ತುಗಳ, ಹಿಂದೂ ಧರ್ಮದ ಅಗಾಧತೆಯನ್ನು ಜಗತ್ತಿಗೆ ಪರಿಚಯಿಸುವ ಮಹದಾಸೆ ಅಸಾಧ್ಯವಾಗುತ್ತಿರುವುದು ಗೋಚರಿಸುತ್ತಿತ್ತು. ಮುಂದೇನು ಮಾಡುವುದು ಎನ್ನುವ ಆಘಾತ ದಲ್ಲಿದ್ದವರಿಗೆ ಕೇಟ್ ಸ್ಯಾನ್ಬೋರ್ನರ ನೆನಪು ಬಂತು.
ಕೆಲವೇ ಘಂಟೆಗಳಲ್ಲಿ ಅವರ "Breezy Meedows" ತೋಟದ ಮನೆಯಲ್ಲಿ ಪ್ರತ್ಯಕ್ಷರಾದರು. ಕೇಟ್ ತುಂಬಾ ಸಂತೋಷದಿಂದ ಬರಮಾಡಿಕೊಂಡರು. ಹತಾಶಗೊಂಡ ಅವರ ಮುಖ ಸೋಲಿನ ಕಥೆಯನ್ನು ಹೇಳುತ್ತಿತ್ತು. ಕಳವಳಗೊಂಡ ಕೇಟ್ ಮೊದಲು ಅವರಿಗೆ ಸ್ನಾನ, ಊಟದ ವ್ಯವಸ್ಥೆ ಮಾಡಿ, ಸ್ವಲ್ಪ ಚೇತರಿಸಿಕೊಂಡ ಮೇಲೆ ವಿವೇಕಾನಂದರಿಂದ ನಡೆದ ವಿಷಯವನ್ನು ಕೂಲಂಕುಷವಾಗಿ ತಿಳಿದುಕೊಳ್ಳುತ್ತಾರೆ. ಪರಿಚಯ ಪತ್ರವಿಲ್ಲದಿದ್ದರೆ ಸಮ್ಮೇಳನದಲ್ಲಿ ಪ್ರವೇಶವಿಲ್ಲ.

ಉಪನ್ಯಾಸಕಿಯಾದುದರಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ ಅನೇಕ ಪ್ರೊಫೆಸರುಗಳ ಪರಿಚಯವಿರುತ್ತದೆ ಕೇಟ್ ಅವರಿಗೆ. ಅದರಲ್ಲಿ ಗ್ರೀಕ್ ಭಾಷೆ ಕಲಿಸುತ್ತಿದ್ದ ಜಾನ್ ಹೆನ್ರಿ ರೈಟ್ ಎನ್ನುವವರು ಸಂಸ್ಕೃತ ಕಲಿತವರು, ಹಾಗಾಗಿ ಭಾರತದ ಮತ್ತು ಭಾರತೀಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುತ್ತದೆ, ವಿವೇಕಾನಂದರಿಗೆ ಪರಿಚಯ ಪತ್ರ ಇವರಿಂದ ಸಿಗಬಹುದು ಎಂದು ವಿವೇಕಾನಂದನಂದರಿಗೆ ಅವರನ್ನು ಪರಿಚಯ ಮಾಡಿ ಕೊಡುತ್ತಾರೆ.

ವಿವೇಕಾನಂದರನ್ನು ನೋಡುತ್ತಲೇ ಪ್ರೊಫೆಸರ್ ರೈಟ್ ಅವರ ಧೀಮಂತ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ. ಮೂರು ದಿನಗಳ ಕಾಲ ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಕೆಲವು ಉಪನ್ಯಾಸ ಸಭೆಗಳನ್ನು ಏರ್ಪಡಿಸಿ ಬೋಸ್ಟನ್ನಿನ ಗಣ್ಯವ್ಯಕ್ತಿಗಳಿಗೆ ಆಮಂತ್ರಣ ನೀಡುತ್ತಾರೆ. ವಿವೇಕಾನಂದರಿಗಿರುವ ಭಾಷಾ ಪ್ರಾವೀಣ್ಯತೆ, ಭಾಷಣದ ಶೈಲಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತದೆ.

ವಿಶ್ವ ಧರ್ಮ ಸಮ್ಮೇಳನಕ್ಕೆ ಹೋಗುವ ಆಸೆಯನ್ನು ಬಿಟ್ಟಿದ್ದ ವಿವಾಕಾನಂದರಲ್ಲಿ ಪ್ರೋತ್ಸಾಹ ತುಂಬುತ್ತಾರೆ ಪ್ರೊಫೆಸರ್ ರೈಟ್.
'ನಿಮ್ಮಂತವರಿಂದ ಪರಿಚಯದ ಪತ್ರಬೇಕೇ ಅವರಿಗೆ....
"To ask for your credentials is like asking the Sun to state it's right to shine."
ಸೂರ್ಯನ ಪ್ರಖರತೆಗೆ ಪರವಾನಗಿ ಬೇಕೇ?

ಕೂಡಲೇ ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ರವರಿಗೆ ಪರಿಚಯ ಪತ್ರ ಬರೆದು ಕಳುಹಿಸುತ್ತಾರೆ. ಆ ಪತ್ರದಲ್ಲಿ... "ವಿವೇಕಾನಂದರೊಬ್ಬರೇ ನಮ್ಮ ಎಲ್ಲಾ ಹಾರ್ವರ್ಡ್ ಪ್ರೊಫೆಸರುಗಳಿಗೆ ಸಮ. ಇವರನ್ನು ನೀವು ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರೆ, ಒಬ್ಬ ಮೇಧಾವಿಯ ಪರಿಚಯದ ಲಾಭ ನಿಮಗಾರಿಗೂ ಸಿಗದು..ಅದು ನಿಮ್ಮ ದುರಾದೃಷ್ಟ " ಎಂದು ಬರೆಯುತ್ತಾರೆ.
ವಿವೇಕಾನಂದರಿಗೆ ನೀವು ಚಿಕಾಗೋಕ್ಕೆ ಹೊರಡಿ ಎಂದು ಬೀಳ್ಕೊಡುತ್ತಾರೆ.

ಇದಾದ ಹಲವಾರು ವರ್ಷಗಳ ಕಾಲ ಇಬ್ಬರೂ ಪತ್ರಗಳ ಮುಖಾಂತರ ಸಂಪರ್ಕವಿಟ್ಟುಕೊಂಡಿರುತ್ತಾರೆ. ಪತ್ರದಲ್ಲಿ ವಿವೇಕಾನಂದರು ಇವರನ್ನು " Dear Adhyapak" ಎಂದೇ ಸಂಭೋದಿಸುತ್ತಿದ್ದರು.

2 ಸೆಪ್ಟೆಂಬರ್1893...  ಬೋಸ್ಟನ್ನಿನಿಂದ ಚಿಕಾಗೋಕ್ಕೆ ಹೊರಡುತ್ತಾರೆ, ಆದರೆ ಅವಘಡಗಳ ಸರಮಾಲೆ ಇನ್ನೂ ಅವರ ಬೆನ್ನು ಬಿಟ್ಟಿರಲಿಲ್ಲ....9/11 ಇನ್ನೂ ಏಳು ದಿನಗಳ ದೂರ...

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

No comments:

Post a Comment